ಮೈಸೂರಿನ ಅರಮನೆ ವೇದಿಕೆಯಲ್ಲಿ ಭಾನುವಾರ ಗಾಯಕ ವಿಜಯ್ ಪ್ರಕಾಶ್ ಪ್ರೇಕ್ಷಕರಿಂದ ಹಾಡಿಸಿದ ಕ್ಷಣ –ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ
ಮೈಸೂರು: ಅರಮನೆ ವೇದಿಕೆಯ ಜಗಮಗಿಸುವ ಬೆಳಕಿನ ಸೊಬಗಿನಲ್ಲಿ ಬಹುಭಾಷಾ ಗಾಯಕ, ಮೈಸೂರಿನವರೇ ಆದ ವಿಜಯ ಪ್ರಕಾಶ್ ಗಾನ ಸುಧೆ ಹರಿಸಿದರು. ಕೇಳುಗರನ್ನು ನಾದದ ಲಹರಿಯಲ್ಲಿ ತೇಲಿಸಿದರು.
ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ‘ಚಾಮುಂಡೇಶ್ವರಿ’ ಕೃತಿಯೊಂದಿಗೆ ಗಾಯನ ಆರಂಭಿಸಿದ ವಿಜಯ್ ಎಲ್ಲರನ್ನು ಭಕ್ತಿ ರಸದಲ್ಲಿ ಮುಳುಗಿಸಿದರು.
ಹಂಸಲೇಖ ಅವರ ‘ಹಬ್ಬ ಹಬ್ಬ ಇದು ಕರುನಾಡ ಮನೆ ಮನೆ ಹಬ್ಬ’ ಎಂದು ಹೇಳಿದರು. ‘ಬೊಂಬೆ ಹೇಳುತೈತೆ.. ನೀನೇ ರಾಜಕುಮಾರ’ ಹಾಡಿನೊಂದಿಗೆ ಸಹೃದಯರಿಂದ ಅರಮನೆ ಬೆಳಕಿನ ಮುಂದೆ ಮೊಬೈಲ್ನ ‘ಕಿರುದೀಪ’ಗಳು ಹೊತ್ತಿಸಿದರು.
‘ಹೊಸ ಬೆಳಕೊಂದು ಹೊಸಲಿಗೆ ಬಂದು...’ ಎನ್ನುತ್ತಿದ್ದಂತೆ ಮುಂದಿನ ಸಾಲುಗಳನ್ನು ಪ್ರೇಕ್ಷಕರೇ ಹೃದಯದುಂಬಿ ಹಾಡಿದರು.
‘ಹಲೋ ಹಲೋ.. ನನ್ನ ಮನಸ್ಸು ಇಲ್ಲೆ ಎಲ್ಲೋ...’, ‘ಒಪನ್ ಹೇರೂ ಬಿಟ್ಕೊಂಡು’, ಕಾಂತಾರ ಚಿತ್ರದ ‘ಸಿಂಗಾರ ಸಿರಿಯೇ..’, ಕಿರಿಕ್ ಪಾರ್ಟಿ ಚಿತ್ರದ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ’ ಎಂದು ಮಾಧುರ್ಯದಲ್ಲಿ ತೇಲಿಸಿದರು. ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲಾ ಅವರು ‘ಸೋಜುಗಾದ ಸೂಜು ಮಲ್ಲಿಗೆ ಮಾದೇವ’ ಎಂದರೆ, ವಿಜಯ್ ಪ್ರಕಾಶ್ ಅವರು ‘ಓಂ ಶಿವೋಹಂ’ ಎಂದು ಭಕ್ತಿ ರಸವನ್ನು ಮತ್ತೆ ಉಕ್ಕಿಸಿದರು. ಪುನೀತ್ ಅವರ ‘ಕಾಣದಂತೆ ಮಾಯವಾದನು’ ಹೇಳಿದರೆ, ಪೃಥ್ವಿ ಭಟ್ ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗಮಾ’ ಎಂದರು. ಇದಕ್ಕೂ ಮೊದಲು ಬೆಂಗಳೂರಿನ ಭೂತಾಯಿ ಬಳಗದ ಸದಸ್ಯರ ತತ್ವ ಪದಗಳು, ಕೂಚುಪುಡಿ ನೃತ್ಯ ಎಲ್ಲರನ್ನು ಆಕರ್ಷಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.