ಮೈಸೂರು: ‘ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎ.ಎಚ್. ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ತಲುಪಿದೆ’ ಎಂದು ದೂರಿದರು.
‘ರಾಜ್ಯದ ಹಣಕಾಸಿನ ಪರಿಸ್ಥಿತಿ ಮುಗ್ಗುರಿಸಿಬಿದ್ದಿದೆ. ವಿರೋಧಪಕ್ಷದ ಸ್ಥಾದಲ್ಲಿರುವ ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಥಿಕ ತಜ್ಞ ಮೋಹನ್ ದಾಸ್ ಪೈ ಕೂಡ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವ ಬಗ್ಗೆ ಆತಂಕದಿಂದ ಮಾತನಾಡಿದ್ದಾರೆ. ಆರ್ಥಿಕ ಬಿಕ್ಕಟ್ಟು ಸರ್ಕಾರದ ಕುತ್ತಿಗೆ ಹಿಸುಕುತ್ತಿದೆ’ ಎಂದು ಆರೋಪಿಸಿದರು.
‘ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೆ ₹ 2ಸಾವಿರ ಕೋಟಿ ಸಾಲ ಪಡೆಯಲು ರಾಜ್ಯಸರ್ಕಾರ ಒಪ್ಪಿಗೆ ನೀಡಿದೆ. ಸಾಲ ಮರುಪಾವತಿಸಲು ಪರದಾಡುತ್ತಿರುವ ಕಾರಣ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ.18ರಷ್ಟು ಬಡ್ಡಿ ಕಟ್ಟಬೇಕಿದೆ. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ರಾಜ್ಯ ಅಧೋಗತಿಗೆ ಬಂದಿದೆ’ ಎಂದು ವಾಗ್ದಾಳಿ ನಡೆಸಿದರು.
ಏನಾದರೂ ಸುಧಾರಣೆ ಆಗಿದೆಯೇ?:
‘ಮುಖ್ಯಮಂತ್ರಿ 16ನೇ ಬಜೆಟ್ ಮಂಡಿಸಲು ಸಿದ್ಧವಾಗುತ್ತಿದ್ದಾರೆ. ಆದರೆ, ಕಳೆದ ವರ್ಷ ಏನು ಬದಲಾವಣೆ ಮಾಡಿದ್ದಾರೆ, ಏನಾದರೂ ಸುಧಾರಣೆ ತಂದಿದ್ದಾರೆಯೇ? ಹೊಸತನದಿಂದ ಆದಾಯ ತಂದಿದ್ದಾರೆಯೇ? ಹಣಕಾಸು ಸ್ಥಿತಿ ಬಗ್ಗೆ ಜನರ ಮುಂದೆ ಸತ್ಯಹೇಳಬೇಕೇ ಹೊರತು ಮುಚ್ಚಿಟ್ಟುಕೊಳ್ಳಬಾರದು’ ಎಂದರು.
‘ಮುಖ್ಯಮಂತ್ರಿಗೆ ಅಧಿಕಾರಿಗಳ ಮೇಲೆ ಹಿಡಿತ ತಪ್ಪಿದೆ. ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ರೂಪಾ ಬೀದಿ ಜಗಳ ಮಾಡಿಕೊಂಡಿದ್ದರೂ ಅವರ ಮೇಲೆ ಶಿಸ್ತು ಕ್ರಮಜರುಗಿಸಿಲ್ಲವೇಕೆ?. ಕೇಂದ್ರ ಸೇವೆಗೆ ವಾಪಸ್ ಕಳುಹಿಸದೆ ಇಲ್ಲೇಕೆ ಇರಿಸಿಕೊಳ್ಳಲಾಗಿದೆ? ಆಡಳಿತದಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳದೇ ಇರುವುದಕ್ಕೆ ಇದಕ್ಕೆ ಕಾರಣವಾಗಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.