
ಕೆ.ಆರ್. ನಗರ: ತಾಲ್ಲೂಕಿನ ದೊಡ್ಡೇಕೊಪ್ಪಲು ಗ್ರಾಮದಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮತದಾರನಿಗೆ ಕಪಾಳ ಮೋಕ್ಷ ಮಾಡಿದರಲ್ಲ, ಜನ ವೋಟು ಕೊಟ್ಟಿದ್ದು ಇದಕ್ಕೇನಾ? ನಿಮ್ಮ ನಾಯಕರಿಗೂ ದುರಹಂಕಾರ, ಅಧಿಕಾರದ ಮದ ಏರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಡಿ.ರವಿಶಂಕರ್ ಹೆಸರು ಹೇಳದೇ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಕಿಡಿಕಾರಿದರು.
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ವತಿಯಿಂದ ಶುಕ್ರವಾರ ನಡೆದ ‘ರಜತ ಮಹೋತ್ಸವ ಸಂಭ್ರಮ’ದಲ್ಲಿ ಮಾತನಾಡಿದ ಅವರು, ನಾನೂ ಪಕ್ಷದ ವರಿಷ್ಠರ ಕಾಲಿಗೆ ನಮಸ್ಕಾರ ಮಾಡುತ್ತೇನೆ, ನನ್ನ ಮೇಲೆ ಪ್ರೀತಿ ಇರುವ ಸ್ನೇಹಿತರು, ನನಗಿಂತ ಚಿಕ್ಕವರು ನನ್ನ ಕಾಲಿಗೆ ನಮಸ್ಕಾರ ಮಾಡುತ್ತಾರೆ. ಪ್ರತಿಯಾಗಿ ನಾನು ಅವರ ತಂದೆ-ತಾಯಿಯಿಂದ ಆಶೀರ್ವಾದ ಪಡೆಯುತ್ತೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವೋಟು ಕೊಟ್ಟ ಮತದಾರರಿಂದ ಕಾಲಿಗೆ ನಮಸ್ಕಾರ ಮಾಡಿಸಿಕೊಂಡರು ಎಂದು ವಿರೋಧ ಪಕ್ಷದವರು ನನ್ನ ವಿರುದ್ಧ ಟೀಕೆ ಮಾಡಿದ್ದರು ಎಂದರು.
ನಾನು ಯಾರ ಕತ್ತು ಹಿಡಿದು ನಮಸ್ಕಾರ ಮಾಡಿ ಎಂದು ಒತ್ತಡ ಹಾಕುವ ಕೆಲಸ ಮಾಡುವುದಿಲ್ಲ, ಆದರೆ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಮತದಾರರ ಕಾಲು ಹಿಡಿದು ವೋಟು ಹಾಕಿಸಿಕೊಂಡು ಇಂದು ಮತದಾರನಿಗೆ ಕಪಾಳ ಮೋಕ್ಷ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ವೋಟು ಕೊಟ್ಟ ಮತದಾರರು ತಂದೆ, ತಾಯಿ, ಅಣ್ಣತಮ್ಮಂದಿರರು ಇದ್ದಂತೆ, ನನ್ನ ಅಧಿಕಾರದ ಅವಧಿಯಲ್ಲೂ ರೇಗಿದ್ದೇನೆ, ಆದರೆ ಯಾರ ಮೇಲೂ ಹಲ್ಲೆ ಮಾಡಲಿಲ್ಲ ಎಂದರು.
ರಾಜಕೀಯ ಎಂದರೆ ಉದ್ಯೋಗ ಅಲ್ಲ, ಅದೊಂದು ಸಾರ್ವಜನಿಕ ಸೇವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಅಧಿಕಾರಿಗಳಿಂದ ಹಣ ವಸೂಲಿ ಮಾಡುವುದು ಒಂದೇ ಭಿಕ್ಷೆ ಬೇಡುವುದು ಒಂದೇ, ಹಣ ಪಡೆದು ಅಧಿಕಾರಿಯೊಬ್ಬರನ್ನು ನೇಮಕ ಮಾಡಿಕೊಂಡರೆ ಅವನು ಜನರಿಂದ ಹಣ ವಸೂಲಿ ಮಾಡುತ್ತಾನೆ. ಆದ್ದರಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣಕ್ಕಾಗಿ ನಿವೇಶನ, ₹1,50ಕೋಟಿ ಅನುದಾನ ಕೊಟ್ಟು ನಾನು ಭೂಮಿ ಪೂಜೆ ಮಾಡಿದ್ದರೂ ಅವರು ಬಂದು ಕಾಮಗಾರಿಗೆ ಚಾಲನೆ ಕೊಟ್ಟರು. ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗೆ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಭೂಮಿ ಪೂಜೆ ಮಾಡಿದ ಹಲವು ಕಡೆ ಮತ್ತೆ ಭೂಮಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ₹6 ಲಕ್ಷ ಕೋಟಿ ಸಾಲ ಮಾಡಲಾಗಿದೆ, ಮೈಸೂರು ಜಿಲ್ಲೆಯ ಮುಖ್ಯಮಂತ್ರಿಗಳೂ ಅಧಿಕ ಸಾಲ ಮಾಡಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಹಾಲಿನಿಂದ ಹಿಡಿದು ಅಲ್ಕೋಹಾಲ್ ವರೆಗೂ ದರ ಹೆಚ್ಚಿಸಿದರು ಎಂದರು.
ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲವೂ ಒಂದೇ, ರಾಜ್ಯ ಉಳಿಯಬೇಕು ಎಂದರೆ ರಾಜ್ಯದಲ್ಲಿ ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ಅವರು ನಾಯಕತ್ವ ವಹಿಸಬೇಕು, ದೇಶ, ರಾಜ್ಯ ಉಳಿಯಲು ಜೆಡಿಎಸ್-ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದರು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಹಂಪಾಪುರ ಕುಮಾರ್, ವಕ್ತಾರ ಕೆ.ಎಲ್.ರಮೇಶ್, ಯೋಗೇಶ್, ಮುಖಂಡರಾದ ಅರ್ಜುನಹಳ್ಳಿ ಗಣೇಶ್, ಹನಸೋಗೆ ನಾಗರಾಜ್, ಎಂ.ತಮ್ಮಣ್ಣ, ತಿಪ್ಪೂರು ಕುಚೇಲ, ಕೆ.ಪಿ.ಪ್ರಭುಶಂಕರ್, ಸಂತೋಷ್ ಗೌಡ, ಕೆ.ಎಲ್.ಜಗದೀಶ್, ಮಂಜುಳಾ ಚಿಕ್ಕವೀರು, ಉಮೇಶ್, ಕಗ್ಗೆರೆ ಗಿರೀಶ್, ಲಾಲನಹಳ್ಳಿ ಮಹೇಶ್, ರಾಜಾ ಶ್ರೀಕಾಂತ್, ಹೊಸೂರು ಮಧು, ಜಿ.ಪಿ.ಮಂಜು, ಮೋಹನಕುಮಾರಿ, ಮುಬಾರಕ್, ರುದ್ರೇಶ್, ಸಿ.ಜೆ.ಆನಂದ, ಎಚ್.ಪಿ.ಶಿವಣ್ಣ, ಅನೀಫ್, ಬಾಲೂರು ನಂಜುಂಡೇಗೌಡ ಭಾಗವಹಿಸಿದ್ದರು.
ನಾನು ಅನುದಾನ ತಂದು ಚಾಲನೆ ನೀಡಿದ ಕಾಮಗಾರಿಗಳಿಗೆ ಈಗಿನ ಶಾಸಕರು ಚಾಲನೆ ನೀಡುತ್ತಿದ್ದಾರೆ -ಸಾ.ರಾ. ಮಹೇಶ್ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.