ಹುಣಸೂರು: ‘ರಾಜ್ಯದಲ್ಲೆಡೆ ಜಲಕ್ಷಾಮ ಎದುರಾಗಿದ್ದು ಸಾರ್ವಜನಿಕರು ನೀರನ್ನು ಸಮಯೋಜಿತವಾಗಿ ಬಳಸಿ ಸಂರಕ್ಷಿಸುವ ದಿಕ್ಕಿನಲ್ಲಿ ಕೈ ಜೋಡಿಸಬೇಕು’ ಎಂದು ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಜೈಬುನ್ನಿಸಾ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಜನ ದಿನಾಚರಣೆ ಹಾಗೂ ಕುಡಿಯುವ ನೀರು ನಿರ್ವಹಣೆ ಮತ್ತು ಸ್ವೀಪ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
‘ದೇಶದ ಪ್ರಗತಿಗೆ ನೀರು ಲಭ್ಯತೆ ಮತ್ತು ಸುಭದ್ರ ಪ್ರಜಾಪ್ರಭುತ್ವ ಸರ್ಕಾರ ಅವಶ್ಯಕವಿದ್ದು, ನಾಗರಿಕರು ನೀರು ಸಂರಕ್ಷಿಸುವ ಮಾದರಿಯಲ್ಲೇ ದೇಶದ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ದೇಶ ರಕ್ಷಣೆಗೆ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಹಬ್ಬದಲ್ಲಿ ಭಾಗವಹಿಸಿ ಸಂವಿಧಾನಾತ್ಮಕವಾಗಿ ಹೊಂದಿರುವ ಮತ ಹಕ್ಕನ್ನು ದಾನ ಮಾಡುವ ಮೂಲಕ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು’ ಎಂದರು.
ನ್ಯಾಯಾಧೀಶ ಮನು ಪಟೇಲ್ ಮಾತನಾಡಿ, ‘ಜಲ ಮತ್ತು ಮತದಾನ ಎರಡು ಒಂದು ನಾಣ್ಯದ ಎರಡು ಮುಖವಿದ್ದಂತೆ ನೀರಿಲ್ಲದೆ ಬದುಕಿಲ್ಲ ಅದೇ ರೀತಿ ಸುಭದ್ರ ಸರ್ಕರವಿಲ್ಲದೆ ಅಭಿವೃದ್ಧಿ ಇಲ್ಲ. ಹೀಗಾಗಿ ಎರಡನ್ನು ಸಾರ್ವಜನಿಕರು ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ’ ಎಂದರು.
ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ ಮಾತನಾಡಿದರು.
ಪಾರ್ವತಿ ಎಪಿಪಿ, ತಹಶೀಲ್ದಾರ್ ನಯನಾ, ಪೌರಾಯುಕ್ತೆ ಲಕ್ಷ್ಮಿ, ಸಂದೀಪ್, ಮಹಮ್ಮದ್ ಕಲೀಮ್, ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.