ADVERTISEMENT

ತಿ.ನರಸೀಪುರ: ಚಿರತೆ ದಾಳಿಗೆ ಮಹಿಳೆ ಸಾವು

ಮನೆ ಹಿಂಭಾಗದಲ್ಲಿ ಸೌದೆ ತರಲು ಹೋಗಿದ್ದಾಗ ಘಟನೆ; ಚಿರತೆ ಸೆರೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 5:07 IST
Last Updated 21 ಜನವರಿ 2023, 5:07 IST
ಸಿದ್ದಮ್ಮ‌
ಸಿದ್ದಮ್ಮ‌   

ತಿ.ನರಸೀಪುರ: ತಾಲ್ಲೂಕಿನ ಕನ್ನನಾಯಕನಹಳ್ಳಿಯಲ್ಲಿ ಶುಕ್ರವಾರ ಚಿರತೆ ದಾಳಿಯಿಂದ ಸಿದ್ದಮ್ಮ‌ (60) ಎಂಬುವವರು ಮೃತಪಟ್ಟರು.

ಮನೆ ಹಿಂಭಾಗ ದಲ್ಲಿ ಸಂಜೆ ಸೌದೆ ತರಲು ಹೋಗಿದ್ದಾಗ ಚಿರತೆ ದಾಳಿ ಮಾಡಿದೆ. ಮುಖ ಹಾಗೂ ಕತ್ತಿನ ಬಳಿ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲೇ ಅಸುನೀಗಿದರು.

ಸ್ಥಳಕ್ಕೆ ಎಸಿಎಫ್ ಲಕ್ಷ್ಮೀಕಾಂತ್, ವಲಯ ಅರಣ್ಯಾಧಿಕಾರಿ ಸೈಯದ್ ನದೀಮ್, ಉಪ ವಲಯಾರಣ್ಯಾಧಿಕಾರಿಗಳಾದ ಮಂಜುನಾಥ್, ಉಮೇಶ್ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಚಿರತೆ ಸೆರೆಗೆ ಸೂಚನೆ: ಕನ್ನನಾಯಕನ ಹಳ್ಳಿಗೆ ಭೇಟಿ ನೀಡಿದ ಶಾಸಕ ಅಶ್ವಿನ್ ಕುಮಾರ್‌ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

‘ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಚಿರತೆ ಸೆರೆಗೆ ಶನಿವಾರದಿಂದಲೇ ಕಾರ್ಯಾಚರಣೆ ಆರಂಭಿಸಬೇಕು. ಕ್ಯಾಮೆರಾಗಳನ್ನು ಅಳವಡಿಸಿ ಚಿರತೆ ಚಲನವಲನಗಳ ಮೇಲೆ ನಿಗಾ ವಹಿಸಬೇಕು’ ಎಂದು ಅಶ್ವಿನ್ ಕುಮಾರ್‌ ಅವರು ಡಿಸಿಎಫ್ ಮಹೇಶ್, ಎಸಿಎಫ್ ಲಕ್ಷ್ಮೀಕಾಂತ್ ಅವರಿಗೆ ಸೂಚಿಸಿದರು.

‘ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೆ. ವನ್ಯಜೀವಿ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಮೃತ ಸಿದ್ದಮ್ಮ ಅವರ ಕುಟುಂಬದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಶನಿವಾರ ಬೆಳಿಗ್ಗೆ ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

ತಹಶೀಲ್ದಾರ್ ಸಿ.ಜಿ.ಗೀತಾ, ಬನ್ನೂರು ಮತ್ತು ತಿ.ನರಸೀಪುರ ಠಾಣೆ ಪೊಲೀಸ್ ಸಿಬ್ಬಂದಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೆಹುಂಡಿ ಮಹೇಶ್, ಎಂ.ರಮೇಶ್, ಕೊತ್ತೇಗಾಲ ಬಸವರಾಜು ಇದ್ದರು.

2 ತಿಂಗಳ ಹಿಂದಷ್ಟೇ ಇಬ್ಬರ ಸಾವು
ಎರಡು ತಿಂಗಳ ಹಿಂದಷ್ಟೇ ಎಂ.‌ಎಲ್.‌ ಹುಂಡಿ ಗ್ರಾಮದ ಯುವಕ ಮಂಜುನಾಥ್ ಹಾಗೂ ಎಸ್. ಕೆಬ್ಬೆಹುಂಡಿಯ ವಿದ್ಯಾರ್ಥಿನಿ ಮೇಘನಾ ಚಿರತೆ ದಾಳಿಯಿಂದ ಮೃತಪಟ್ಟ ಘಟನೆ ಮಾಸುವ ಮುನ್ನವೇ ಸಿದ್ದಮ್ಮ ಮೇಲೆ ಚಿರತೆ ದಾಳಿ ನಡೆಸಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮುತ್ತತ್ತಿ ಬಳಿ ಹಾಗೂ ಉಕ್ಕಲಗೆರೆ ಬೆಟ್ಟದ ಬಳಿ ಎರಡು ಚಿರತೆಗಳನ್ನು ಸೆರೆ ಹಿಡಿದಿದ್ದರು. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಚಿರತೆ ದಾಳಿ ನಡೆಸಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.