ADVERTISEMENT

‘ಯೋಗಕ್ಷೇಮ ಯಾತ್ರೆ’ ಸಮಾರೋಪ

ಕೃಷ್ಣರಾಜ ಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಶಾಸಕ ಎಸ್‌.ಎ.ರಾಮದಾಸ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:47 IST
Last Updated 12 ಅಕ್ಟೋಬರ್ 2020, 8:47 IST
‘ಯೋಗಕ್ಷೇಮ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಸ್‌.ಎ.ರಾಮದಾಸ್, ಡಾ.ಚಂದ್ರಗುಪ್ತ, ಗುರುದತ್ತ ಹೆಗಡೆ ಪಾಲ್ಗೊಂಡಿದ್ದರು
‘ಯೋಗಕ್ಷೇಮ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಸ್‌.ಎ.ರಾಮದಾಸ್, ಡಾ.ಚಂದ್ರಗುಪ್ತ, ಗುರುದತ್ತ ಹೆಗಡೆ ಪಾಲ್ಗೊಂಡಿದ್ದರು   

ಮೈಸೂರು: ಕೊರೊನಾದಿಂದ ಎದುರಿಸುತ್ತಿರುವ ಸಂಕಷ್ಟ ಹಾಗೂ ಜನರ ಇತರ ಸಮಸ್ಯೆಗಳನ್ನು ಆಲಿಸಲು ಶಾಸಕ ಎಸ್‌.ಎ.ರಾಮದಾಸ್‌ ಅವರು ಕೃಷ್ಣರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ಯೋಗಕ್ಷೇಮ’ ಯಾತ್ರೆ ಭಾನುವಾರ ಮುಕ್ತಾಯಗೊಂಡಿತು.

ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅ.5ಕ್ಕೆ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಒಂದು ವಾರದ ಅವಧಿಯಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿದರು. ಹಲವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ.

ಏಳನೇ ಹಾಗೂ ಕೊನೆಯ ದಿನದ ಯಾತ್ರೆ ವಾರ್ಡ್ ನಂ.43 ರಲ್ಲಿ ನಡೆಯಿತು. ಶಾಸಕರು ಸಂಬಂಧಪಟ್ಟ ಅಧಿಕಾರಿಗಳ ಜತೆ ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿದರು. ಸಾಹುಕಾರ್ ಚೆನ್ನಯ್ಯ ರಸ್ತೆಯಲ್ಲಿರುವ ಬ್ರಹ್ಮಸ್ಥಾನ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಿತು.

ADVERTISEMENT

ಈ ವೇಳೆ ಮಾತನಾಡಿದ ರಾಮ ದಾಸ್, ‘ಪಕ್ಷದ 270 ಜನ ಬೂತ್‌ ಮಟ್ಟದ ಅಧ್ಯಕ್ಷರು, 23 ಕ್ಕೂ ಅಧಿಕ ಇಲಾಖೆಗಳ ಅಧಿಕಾರಿಗಳು ಈ ಯೋಗಕ್ಷೇಮ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಕೆ.ಆರ್‌.ಕ್ಷೇತ್ರದಲ್ಲಿ ಕೆಲವೇ ದಿನಗಳಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗುವುದು. ಶಾಲೆ ಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸವನ್ನು ಈಗಾ ಗಲೇ ಪ್ರಾರಂಭಿಸಿದ್ದೇವೆ. ಯೋಗಕ್ಷೇಮ ಯಾತ್ರೆಯನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಮುಂದಿನ 100 ದಿನಗಳು ನಮಗೆ ಮಹತ್ವದ್ದಾಗಿವೆ’ ಎಂದರು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ‘ಪಾಲಿಕೆಯ ಅಧಿಕಾರಿಗಳಿಗೆ ಯೋಗಕ್ಷೇಮ ಯಾತ್ರೆಯಿಂದ ಜನರ ಕಷ್ಟಗಳನ್ನು ನೋಡುವ ಅವಕಾಶ ಲಭಿಸಿದೆ. ಜನರೊಂದಿಗೆ ಮುಕ್ತ ಸಂವಾದ ನಡೆಸಲು ಸಾಧ್ಯವಾಗಿದೆ. ಇದಕ್ಕಾಗಿ ರಾಮದಾಸ್‌ ಅವರನ್ನು ಅಭಿನಂದಿಸುತ್ತೇನೆ’ ಎಂದರು.

ಯೋಗಕ್ಷೇಮ ಯಾತ್ರೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು, ವಿವಿಧ ಇಲಾಖೆಗಳ ನೌಕರರನ್ನು ಸನ್ಮಾನಿಸಿ, ಪ್ರಮಾಣಪತ್ರ ನೀಡಲಾಯಿತು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕೆ.ಆರ್.ಆಸ್ಪತ್ರೆಯ ವೈದ್ಯ ಡಾ. ಪ್ರಶಾಂತ್, ಡಾ.ಪ್ರೀತಿ, ಕೆ.ಆರ್‌.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಉಪಾಧ್ಯಕ್ಷ ಓಂ ಶ್ರೀನಿವಾಸ್, ಜೆ.ರವಿ, ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ನೂರ್ ಫಾತಿಮಾ, ನಾಗೇಂದ್ರ (ಕೇಬಲ್), ಆಶ್ರಯ ಸಮಿತಿ ಸದಸ್ಯೆ ವಿದ್ಯಾ, ಯುವಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಪ್ರಸಾದ್ ಬಾಬು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.