ADVERTISEMENT

ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ: ಸಚಿವ ಸತೀಶ ಜಾರಕಿಹೊಳಿ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:12 IST
Last Updated 30 ಅಕ್ಟೋಬರ್ 2025, 4:12 IST
ಹುಣಸೂರು ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಉದ್ಘಾಟಿಸಿದರು. ಶಾಸಕ ಜಿ.ಡಿ.ಹರೀಶ್‌ ಗೌಡ, ಪುಷ್ಪಾ ಅಮರನಾಥ್‌, ಶಾಸಕ ಅನಿಲ್‌ ಚಿಕ್ಕಮಾದು ಮತ್ತು ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ ಪಾಲ್ಗೊಂಡಿದ್ದರು
ಹುಣಸೂರು ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಉದ್ಘಾಟಿಸಿದರು. ಶಾಸಕ ಜಿ.ಡಿ.ಹರೀಶ್‌ ಗೌಡ, ಪುಷ್ಪಾ ಅಮರನಾಥ್‌, ಶಾಸಕ ಅನಿಲ್‌ ಚಿಕ್ಕಮಾದು ಮತ್ತು ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ ಪಾಲ್ಗೊಂಡಿದ್ದರು   

ಹುಣಸೂರು: ನಾಯಕ ಸಮುದಾಯದ ಯುವಕರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಆಸ್ತಿಯಾಗುವ ಪ್ರಯತ್ನ ಮಾಡಬೇಕು ಎಂದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಯಕ ಸಮುದಾಯದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮಸ್ಯೆ ಹೆಚ್ಚಿದ್ದು, ಯುವಕರು ಈ ದಿಕ್ಕಿನಲ್ಲಿ ಗಂಭೀರವಾಗಿ ಚಿಂತಿಸಿ ಉನ್ನತ ಹಂತಕ್ಕೆ ಬೆಳೆದು ಆರ್ಥಿಕ ಸಮಸ್ಯೆಯನ್ನು ನೀಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಶಿಕ್ಷಣವನ್ನು ಯಾರೊಬ್ಬರಿಂದಲೂ ಕಳವು ಮಾಡಲು ಸಾಧ್ಯವಿಲ್ಲ, ಹೀಗಾಗಿ ಜ್ಞಾನ ಸಂಪಾದಿಸಿ ಆಸ್ತಿಯನ್ನಾಗಿಸಿಕೊಳ್ಳಿ’ ಎಂದರು.

ADVERTISEMENT

‘ಜಯಂತ್ಯುತ್ಸವಗಳು ಮಹನೀಯರ ಸ್ಮರಣೆಗೆ ಸೀಮಿತಗೊಳ್ಳದೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಕೆಲಸಕ್ಕೆ ಪ್ರೇರಣೆ ಸಿಗುವಂತಾಗಬೇಕು ಎಂಬ ದೃಷ್ಟಿಯಲ್ಲಿ ಆಚರಿಸುತ್ತೇವೆ. ವಾಲ್ಮೀಕಿ, ಬುದ್ಧ, ಬಸವಣ್ಣ ಅವರನ್ನು ಆದರ್ಶರನ್ನಾಗಿಸಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಮಾತನಾಡಿ, ‘ವಾಲ್ಮೀಕಿ ಸಮುದಾಯದವರು ಅಕ್ಷರ ಸಂಸ್ಕೃತಿ ಬೆಳೆಸಿಕೊಂಡು ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು. ರಾಮಾಯಣ ಮತ್ತು ಮಹಾಭಾರತ ಸೃಷ್ಟಿಕರ್ತರಾದ ಮಹರ್ಷಿ ವಾಲ್ಮೀಕಿ ಮತ್ತು ವ್ಯಾಸರು ನಾಣ್ಯದ ಎರಡು ಮುಖಗಳಿದ್ದಂತೆ. ಈ ಗ್ರಂಥವನ್ನು ಪ್ರತಿ ನಿತ್ಯ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಸಮಸಮಾಜ ಪರಿಕಲ್ಪನೆಯಲ್ಲಿ ರಚಿತವಾದ ಗ್ರಂಥದಲ್ಲಿನ ವಿಚಾರವನ್ನು ಮೈಗೂಡಿಸಿಕೊಂಡು ನಾಯಕ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ಅಧಿಕಾರದ ಗದ್ದುಗೆ ಹಿಡಿಯುವ ದಿಕ್ಕಿನಲ್ಲಿ ಓಡುವ ಬದಲಿಗೆ ಅಧಿಕಾರದ ಗದ್ದುಗೆ ತನ್ನತ್ತ ಬರುವಂತೆ ಸೃಷ್ಟಿಸುವ ಸಂಸ್ಕೃತಿ ಮತ್ತು ಸಂಸ್ಕಾರ ನಿಮ್ಮದಾಗಬೇಕಿದೆ’ ಎಂದರು.

ಶಾಸಕ ಜಿ.ಡಿ.ಹರೀಶ್‌ ಗೌಡ ಮಾತನಾಡಿ, ‘ನಾಯಕ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರವಿದ್ದು, ಇದರ ಹಿಂದೆ ಮಾಜಿ ಶಾಸಕ ದಿ.ಚಿಕ್ಕಮಾದು ಮತ್ತು ಉಗ್ರಪ್ಪ ಅವರ ಕೊಡುಗೆ ಹಾಗೂ ಶ್ರಮ ಅಪಾರ’ ಎಂದರು.

‘ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಳಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಿದ್ದು, ಹಂತ ಹಂತವಾಗಿ ಅನುದಾನ ಸಮೇತ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ’ ಎಂದರು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌, ಅಗ್ನಿಶಾಮಕ ದಳ ಡಿಐಜಿ ರವಿಚನ್ನಣ್ಣನವರ್‌, ಸಂಸದ ಜಿ.ಕುಮಾರನಾಯಕ್‌, ಪ್ರಧಾನ ಭಾಷಣಕಾರ ಪ್ರಶಾಂತ್‌ ನಾಯಕ್‌, ಪ್ರಸನ್ನಾನಂದಾ ಸ್ವಾಮೀಜಿ, ನಟರಾಜಸ್ವಾಮೀಜಿ ಮಾತನಾಡಿದರು. ಶಾಸಕ ಅನಿಲ್‌ ಚಿಕ್ಕಮಾದು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಅಣ್ಣಯ್ಯನಾಯಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶೋಭಾ ಮೋಹನ್‌ ಹಾಗೂ ಸಮುದಾಯದ ಮುಖಂಡರಿದ್ದರು.

ಹುಣಸೂರು ನಗರದ ಪ್ರಮುಖ ರಸ್ತೆಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಕುರಿತ ಸ್ತಬ್ದ ಚಿತ್ರ ಮತ್ತು ಜಾನಪದ ಕಲಾತಂಡದೊಂದಿಗೆ ಸಮುದಾಯದವರು ಬೃಹತ್‌ ಮೆರವಣಿಗೆಯಲ್ಲಿ ಬುಧವಾರ ಭಾಗವಹಿಸಿದ್ದರು.
ರಾಜ್ಯದಾದ್ಯಂತ ರಸ್ತೆ ಗುಂಡಿ ಬಿದ್ದಿದ್ದು ಡಿಸೆಂಬರ್‌ ನಂತರದಲ್ಲಿ ಎಲ್ಲಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ಅನುದಾನ ಸಮೇತ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿ ಗುಂಡಿಮುಕ್ತ ರಸ್ತೆಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ
ಸತೀಶ್‌ ಜಾರಕಿಹೊಳಿ ಲೋಕೋಪಯೋಗಿ ಸಚಿವ
‘ಹೂಮಾಲೆ ಬಿಡಿ ಪುಸ್ತಕ ಕೊಡಿ’
ಕಾರ್ಯಕ್ರಮಗಳಲ್ಲಿ ಹೂಮಾಲೆ ಹಾಕುವ ಬದಲಿಗೆ ಜ್ಞಾನ ವೃದ್ಧಿಗೆ ಪೂರಕವಾದ ಪುಸ್ತಕವನ್ನು ಕೊಡುವ ದಿಕ್ಕಿನಲ್ಲಿ ಬದಲಾವಣೆಯಾಗಿ ಹೂ ಒಂದು ದಿನಕ್ಕೆ ಅದರ ಶಕ್ತಿ ಮುಗಿಯುತ್ತದೆ ಆದರೆ ಪುಸ್ತಕ ನಮ್ಮ ಜೀವ ಇರುವವರೆಗೂ ಜ್ಞಾನ ಶಕ್ತಿ ನೀಡುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆಗೆ ವಿರೋಧ
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಆರಂಭಿಸಿದ್ದಾರೆ. ಈ ಚರ್ಚೆಗೆ ನಾಯಕ ಸಮುದಾಯ ವಿರೋಧವಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ಜಾತಿ ಸಮೀಕ್ಷೆ ನಡೆಸಿ ಶೇಕಡವಾರು ಆಧರಿಸಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಕ್ರಮವಹಿಸಲಿ ಆದರೆ ಪ್ರಸ್ತುತ ಇರುವ ಮೀಸಲಾತಿಗೆ ಕುರುಬ ಸಮಾಜ ಸೇರಿಸುವುದು ಸರಿಯಲ್ಲ ಎಂದು ವಿ.ಎಸ್.ಉಗ್ರಪ್ಪ ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.