ADVERTISEMENT

ಯುವ ಶಕ್ತಿ ದೇಶ ಕಟ್ಟಲು ಬಳಕೆಯಾಗಲಿ

ಛಾಯಾಚಿತ್ರ ಪತ್ರಿಕೋದ್ಯಮ ತರಬೇತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:04 IST
Last Updated 10 ಆಗಸ್ಟ್ 2022, 13:04 IST
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿರುವ 90 ದಿನಗಳ ಛಾಯಾಚಿತ್ರ ಪತ್ರಿಕೋದ್ಯಮ ಹಾಗೂ ಕಿರುಚಿತ್ರಗಳ ನಿರ್ಮಾಣ ವೃತ್ತಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ನೆಹರೂ ಯುವ ಕೇಂದ್ರ ಸಂಘಟನೆ ನಿರ್ದೇಶಕ ಎಂ.ಎನ್.ನಟರಾಜ್ ಕ್ಯಾಮೆರಾ ಚಾಲನೆ ಮಾಡಿ ಉದ್ಘಾಟಿಸಿದರು/ ಪ್ರಜಾವಾಣಿ ಚಿತ್ರ
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿರುವ 90 ದಿನಗಳ ಛಾಯಾಚಿತ್ರ ಪತ್ರಿಕೋದ್ಯಮ ಹಾಗೂ ಕಿರುಚಿತ್ರಗಳ ನಿರ್ಮಾಣ ವೃತ್ತಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ನೆಹರೂ ಯುವ ಕೇಂದ್ರ ಸಂಘಟನೆ ನಿರ್ದೇಶಕ ಎಂ.ಎನ್.ನಟರಾಜ್ ಕ್ಯಾಮೆರಾ ಚಾಲನೆ ಮಾಡಿ ಉದ್ಘಾಟಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ‘ಯುವಶಕ್ತಿಯನ್ನು ದೇಶ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳಬೇಕು’ ಎಂದು ರಾಜ್ಯ ನೆಹರೂ ಯುವ ಕೇಂದ್ರ ಸಂಘಟನೆ ನಿರ್ದೇಶಕ ಎಂ.ಎನ್.ನಟರಾಜ್ ಆಶಯ ವ್ಯಕ್ತಪಡಿಸಿದರು.

ನೆಹರೂ ಯುವ ಕೇಂದ್ರ, ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಛಾಯಾಚಿತ್ರ ಪತ್ರಿಕೋದ್ಯಮ ಅಕಾಡೆಮಿ, ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿರುವ 90 ದಿನಗಳ ಛಾಯಾಚಿತ್ರ ಪತ್ರಿಕೋದ್ಯಮ ಹಾಗೂ ಕಿರುಚಿತ್ರಗಳ ನಿರ್ಮಾಣ ವೃತ್ತಿ ತರಬೇತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇಡೀ ವಿಶ್ವವೇ ಇಂದು ಭಾರತದತ್ತ ನೋಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 46 ಕೋಟಿ ಜನರು ಯುವಕರನ್ನು ಹೊಂದಿರುವುದು ಇದಕ್ಕೆ ಕಾರಣ’ ಎಂದರು.

ADVERTISEMENT

‘ವೃತ್ತಿಗಳಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದಲ್ಲ. ಶ್ರದ್ಧೆ-ಪರಿಶ್ರಮದಿಂದ ಯಾವ ಕೆಲಸ ಮಾಡಿದರೂ ಆ ವೃತ್ತಿಗೆ ಗೌರವ ಸಿಗುತ್ತದೆ. ಯಾವ ವೃತ್ತಿಯನ್ನೂ ಕೀಳಾಗಿ ಕಾಣದೆ, ಪ್ರೀತಿಸಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಪ್ರತಿಫಲ ಸಿಗುತ್ತದೆ. ಅನಕ್ಷರಸ್ಥೆಯಾದ ಸಾಲು ಮರದ ತಿಮ್ಮಕ್ಕ ಇಂದು ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಪರಿಸರ ಪ್ರೇಮ ಮತ್ತು ಶ್ರಮವೇ ಇದಕ್ಕೆ ಉದಾಹರಣೆ’ ಎಂದರು.

‘ಅನಕ್ಷರಸ್ಥರು ಹಾಗೂ ನಿರುದ್ಯೋಗಿಗಳನ್ನು ಗುರುತಿಸಿ ಅವರಿಗೆ ಕೌಲಶ ತರಬೇತಿ ನೀಡುವ ಉದ್ದೇಶದಿಂದ ಆರಂಭವಾದ ಸಂಸ್ಥೆಯೇ ನೆಹರೂ ಯುವ ಕೇಂದ್ರ. ಗ್ರಾಮೀಣ ಯುವಕರಿಗೆ ವಿವಿಧ ಕೌಲಲ ತರಬೇತಿ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಆಶಯ ಹೊಂದಿದೆ’ ಎಂದು ಹೇಳಿದರು.

ಸಂಪರ್ಕ ಇಟ್ಟುಕೊಳ್ಳಿ:

‘ಪತ್ರಿಕೋದ್ಯಮ ವಿದ್ಯಾಥಿಗಳು ಮಾಧ್ಯಮ ಕಚೇರಿಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳಬೇಕು. ಇದರಿಂದ ವೃತ್ತಿ ಕೌಶಲ, ಬರವಣಿಗೆ ವೃದ್ಧಿಯಾಗುತ್ತಿದೆ. ಕನಿಷ್ಠ ಎರಡು ಪತ್ರಿಕೆಗಳನ್ನು ಓದುವ ಮತ್ತು ಬರೆಯುವ ಅಭ್ಯಾಸ ಅಳವಡಿಸಿಕೊಂಡರೆ ಉತ್ತಮ ಬರಹಗಾರರಾಗಿ ರೂಪಿಗೊಳ್ಳಲು ಸಾಧ್ಯವಾಗುತ್ತದೆ’ ಎಂದು‘ಕನ್ನಡಪ್ರಭ’ದ ಕಾರ್ಯನಿರ್ವಾಹಕ ಸಂ‍ಪಾದಕ ಅಂಶಿ ಪ್ರಸನ್ನಕುಮಾರ್ ತಿಳಿಸಿದರು.

‘ಪತ್ರಿಕೋದ್ಯಮ ವಿಷಯದ ಅಧ್ಯಯನದಲ್ಲಿ ಪ್ರಾಯೋಗಿಕ ಮಹತ್ವವೇ ಹೆಚ್ಚಿರುವುದರಿಂದ ಪ್ರಾಯೋಗಿಕ ಪತ್ರಿಕೆ ಹೊರತರುವುದು, ಸುದ್ದಿ ಸಂಗ್ರಹ ಚಟುವಟಿಕೆ ನಡೆಸುವುದು ಹಾಗೂ ವಿಷಯ ತಜ್ಞರ ವಿಶೇಷ ಉಪನ್ಯಾಸಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಜ್ಞಾನ ದೊರೆಯುತ್ತದೆ’ ಎಂದು ಹೇಳಿದರು.

ಧ್ವಜ ವಿತರಣೆ:

‘ಡೆಕ್ಕನ್ ಹೆರಾಲ್ಡ್‌’ ವಿಶೇಷ ವರದಿಗಾರ ಟಿ.ಆರ್.ಸತೀಶ್‌ಕುಮಾರ್‌, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಮಾತನಾಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನೆಹರೂ ಯುವ ಕೇಂದ್ರದಿಂದ ವಿದ್ಯಾರ್ಥಿನಿಯರು ಹಾಗೂ ಪ್ರಾಂಶುಪಾಲರಿಗೆ ರಾಷ್ಟ್ರಧ್ವಜಗಳನ್ನು ವಿತರಿಸಲಾಯಿತು.

ಮೈಸೂರು ಛಾಯಾಚಿತ್ರ ಪತ್ರಿಕೋದ್ಯಮ ಅಕಾಡೆಮಿ ಎಂ.ಆರ್.ಮಂಜುನಾಥ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಘವೇಂದ್ರ ಎಸ್.ಜಿ., ಸಹಾಯಕ ಪ್ರಾಧ್ಯಾಪಕರಾದ ಮಹಾದೇವಯ್ಯ, ಗೋವಿಂದರಾಜು, ಡಾ.ಗೋಪಾಲ್, ಡಾ.ಕೆ.ಎಸ್.ಕುಮಾರ್ ಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕೀರ್ತಿ ಸ್ವಾಗತಿಸಿದರು. ದೀಪಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.