ADVERTISEMENT

ಬಯಸಿದ್ದು ವೈದ್ಯ ವೃತ್ತಿ, ಆಗಿದ್ದು ರೈತ ಮಹಿಳೆ!

‘ರೈತ ಮಹಿಳೆ’ ಪ್ರಶಸ್ತಿಗೆ ಪಾತ್ರರಾದ ಹೇಮಾ ಅನಂತ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 4:36 IST
Last Updated 16 ನವೆಂಬರ್ 2018, 4:36 IST
ಹೇಮಾ ಅನಂತ್
ಹೇಮಾ ಅನಂತ್   

ಬೆಂಗಳೂರು: ವೈದ್ಯೆ ಆಗಬೇಕೆಂಬುದು ಇವರ ಬಾಲ್ಯದ ಕನಸು. ಆದರೆ, ಆಗಿದ್ದು ರೈತ ಮಹಿಳೆ.

ಗುರುವಾರ ಕೃಷಿ ಮೇಳದಲ್ಲಿ ರಾಜ್ಯಮಟ್ಟದ ‘ರೈತ ಮಹಿಳೆ’ ಪ್ರಶಸ್ತಿಗೆ ಪಾತ್ರರಾದ ಹೇಮಾ ಅನಂತ್‌ ಅವರ ಕಥೆ ಇದು. ಇವರು ಹಾಸನ ತಾಲ್ಲೂಕಿನ ದುದ್ದ ಹೋಬಳಿ ಗೌರಿಪುರದವರು.

ಐದು ಎಕರೆ ಖುಷ್ಕಿ, 20 ಎಕರೆ ತೋಟದಲ್ಲಿ ಸಾವಯವ ಕೃಷಿ ಕೈಗೊಂಡು ತೆಂಗು, ಅಡಿಕೆ, ಕಾಫಿ, ಬಾಳೆ, ಆಲೂಗಡ್ಡೆ, ಶುಂಠಿ, ನಿಂಬೆ, ಅರಿಶಿಣ, ಗುಲಾಬಿ, ಮಾವು, ಸಪೋಟ, ಹಲಸು, ತರಕಾರಿಗಳು ರಾಗಿ, ಮುಸುಕಿನ ಜೋಳ, ಭತ್ತ ಬೆಳೆಯುತ್ತಿದ್ದಾರೆ. ಹೊಲದಲ್ಲಿ ತಾವು ದುಡಿಯುವುದಲ್ಲದೆ ಒಂದಷ್ಟು ಜನರಿಗೂ ಉದ್ಯೋಗವನ್ನೂ ನೀಡಿದ್ದಾರೆ.

ADVERTISEMENT

ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚಿರುವಾಗ ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬ ಅವರ ನೇರ ಉತ್ತರ, ‘ಕೃಷಿಯ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ ಇಷ್ಟಪಟ್ಟೇ ಕೃಷಿ ಮಾಡಿಕೊಂಡು ಬಂದಿದ್ದೇನೆ’ ಎಂದರು.

‘ಕೆಲವು ಬೆಳೆಗಳಿಗೆ ಬೆಲೆ ಕುಸಿದು ಹೋದಾಗ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ನಿರ್ದಿಷ್ಟ ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ ಬಗ್ಗೆ ಆಲೋಚನೆ ಮಾಡಿ ಅದನ್ನು ಕಾರ್ಯಗತಗೊಳಿಸುತ್ತೇನೆ. ಇದರಿಂದ ನಷ್ಟಕ್ಕೆ ಒಳಗಾಗುವುದನ್ನು ಮೊದಲೇ ಯೋಚಿಸಿ ತಡೆಯುವ ವಿಧಾನ ಅನುಸರಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

‘ಉಪ್ಪು, ಸಕ್ಕರೆ, ಬೆಲ್ಲ ಬಿಟ್ಟು ಬಾಕಿ ಎಲ್ಲ ಬೆಳೆಯುತ್ತೇನೆ. ಮನೆ ಮುಂದೆ ಕೃಷಿ ಉತ್ಪನ್ನ ಇಡುತ್ತೇನೆ. ಜನ ಬಂದು ತಮಗೆ ಬೇಕಾದ ಹಣ್ಣು–ತರಕಾರಿಗಳನ್ನು ತೂಕ ಮಾಡಿಕೊಂಡು ಹಣ ಇಟ್ಟು ಹೋಗುತ್ತಾರೆ. ಉಳಿದ ಕೃಷಿ ಉತ್ಪನ್ನವನ್ನು ಅಂಗಡಿಗೆ ಕೊಟ್ಟು ನಮ್ಮ ಮನೆಗೆ ಅಗತ್ಯವಿರುವ ವಸ್ತು ವಿನಿಮಯ ಮಾಡಿಕೊಂಡು ಬರುತ್ತೇನೆ’ ಎಂದು ಹೇಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.