ADVERTISEMENT

`ಕಕ್ಷಿದಾರರ ಮನವೊಲಿಸಿ ಪ್ರಕರಣ ಇತ್ಯರ್ಥಪಡಿಸಿ'

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:04 IST
Last Updated 7 ಸೆಪ್ಟೆಂಬರ್ 2013, 6:04 IST

ರಾಯಚೂರು: ಕಕ್ಷಿದಾರರಿಗೆ ಪ್ರಕರಣಗಳ ಬಗ್ಗೆ ಆತ್ಮೀಯವಾಗಿ ಮನವರಿಕೆ ಮಾಡಿಕೊಟ್ಟು, ಸುಸೂತ್ರವಾಗಿ ಬಗೆಹರಿಸುವ ವಿಧಾನವೇ ಮಧ್ಯಸ್ಥಿಕೆಯಾಗಿದೆ. ಈ ರೀತಿ ಕಾರ್ಯನಿರ್ವಹಿಸುವಾಗ ಸಂಘರ್ಷ ಹಂತ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷ ಪಿ. ಕೃಷ್ಣಭಟ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಮಧ್ಯಸ್ಥಿಕೆದಾರರ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾನೂನು ಜ್ಞಾನ ಎಂಬುದು ಪ್ರತಿಯೊಬ್ಬರಿಗೂ ಅವಶ್ಯಕ. ಮಧ್ಯಸ್ಥಿಕೆಯಲ್ಲಿ ತೀರ್ಮಾನಕ್ಕೆ ಬರುವಾಗ ಯಾರಿಗೂ ಅನ್ಯಾಯವಾಗಬಾರದು. ಆ ರೀತಿ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ ಮಾತನಾಡಿ, ಮಧ್ಯಸ್ಥಿಕೆ ವ್ಯವಸ್ಥೆ ಉತ್ತಮ ವ್ಯವಸ್ಥೆಯಾಗಿದೆ. ಪಂಚಾಯಿತಿ ಕಟ್ಟೆಯಡಿ ನ್ಯಾಯ ನಿರ್ಣಯ ಪದ್ಧತಿ ಈ ದೇಶದಲ್ಲಿ ನಡೆದುಕೊಂಡು ಬಂದಿದೆ. ಈಗಿನ ದಿನಗಳಲ್ಲಿ ಈ ಮಧ್ಯಸ್ಥಿಕೆ ವ್ಯವಸ್ಥೆ ಕಾರ್ಯವೂ ಉತ್ತಮವಾದುದು ಎಂದು ತಿಳಿಸಿದರು.

ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರದ ತರಬೇತುದಾರ ಎಸ್.ಎನ್ ಸುಧಾ, ಎಂ. ಜ್ಯೋತಿ, ಚಂದ್ರಮೋಹನ್, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಕಾರ್ಯದರ್ಶಿ ಮಹಮ್ಮದ್ ಮುಜಾಹೀದ್ ಉಲ್ ಉಪಸ್ಥಿತರಿದ್ದರು. ವಕೀಲರಾದ ಸಹನಾ ಹಿರೇಮಠ ಸ್ವಾಗತಿಸಿದರು. ಬಸನಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.