ADVERTISEMENT

ಕಾಮಗಾರಿಗಳ ಅವೈಜ್ಞಾನಿಕ ಅನುಷ್ಠಾನಕ್ಕೆ ಯಾರು ಹೊಣೆ?

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 10:35 IST
Last Updated 5 ಏಪ್ರಿಲ್ 2012, 10:35 IST
ಕಾಮಗಾರಿಗಳ ಅವೈಜ್ಞಾನಿಕ ಅನುಷ್ಠಾನಕ್ಕೆ ಯಾರು ಹೊಣೆ?
ಕಾಮಗಾರಿಗಳ ಅವೈಜ್ಞಾನಿಕ ಅನುಷ್ಠಾನಕ್ಕೆ ಯಾರು ಹೊಣೆ?   

ಲಿಂಗಸುಗೂರ(ಮಸ್ಕಿ): ಗ್ರಾಮೀಣ ಪ್ರದೇಶ ಅಭಿವೃದ್ಧಿ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಯೋಜನೆಗಳ ಮೂಲ ಉದ್ದೇಶಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಹಲವು ಉದಾಹರಣೆಗಳು ತಾಲ್ಲೂಕಿನಾದ್ಯಂತ ಕಾಣಸಿಗುತ್ತವೆ. ಕಾಮಗಾರಿಗಳನ್ನು ಕೂಡ ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಯಾರು ಹೊಣೆ? ಎಂಬ ಜನಸಾಮಾನ್ಯರ ಪ್ರಶ್ನೆಗೆ ಉತ್ತರಗಳೆ ಇಲ್ಲವಾಗಿವೆ.

ಗ್ರಾಮೀಣ ಪ್ರದೇಶಗಳಿಗೆ ಪ್ರಮುಖ ರಸ್ತೆಯಿಂದ ಸಂಪರ್ಕ ರಸ್ತೆಗಳ ನಿರ್ಮಾಣ, ಗ್ರಾಮದಿಂದ ಹೊಲ ಮನೆಗೆ ಸಂಪರ್ಕಿಸುವ ರಸ್ತೆ, ಕುಡಿಯುವ ನೀರಿಗಾಗಿ ಕೊರೆಸುವ ಕೊಳವೆಭಾವಿ, ಪೈಪಲೈನ್ ಅಳವಡಿಕೆ, ಅಂತರ್ಜಲ ಮಟ್ಟ ಹೆಚ್ಚಿಸಲು ನಿರ್ಮಿಸುತ್ತಿರುವ ಚೆಕ್ ಡ್ಯಾಮ್, ಗ್ರಾಮ ಮತ್ತು ಪಟ್ಟಣ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳ ಅಧ್ಯಯನ ಪ್ರವಾಸ ಒಂದೆ, ಎರಡೆ ನೂರಾರು ಯೋಜನೆಗಳಡಿ ಸಿದ್ಧಪಡಿಸಿದ ಕ್ರಿಯಾಯೋಜನೆಗಳ ಅವೈಜ್ಞಾನಿಕ ಅನುಷ್ಠಾನದಿಂದ ಪ್ರತಿ ವರ್ಷ ಕೋಟ್ಯಂತರ ಹಣ ದುರ್ಬಳಕೆ ಆಗುತ್ತಿದೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ಆರೋಪಿಸಿದ್ದಾರೆ.

ನಿರ್ಮಿತಿ ಕೇಂದ್ರದಂತಹ ಬಹುತೇಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸರ್ಕಾರದ ಹಣವನ್ನು ಮುಂಗಡ ಪಾವತಿಸಿಕೊಂಡು ಶಾಲಾ ಕಟ್ಟಡ, ಶೌಚಾಲಯಗಳ ನಿರ್ಮಾಣ, ಅಂಗನವಾಡಿ ಕೇಂದ್ರದ ಕಟ್ಟಡ, ಸಮುದಾಯ ಭವನಗಳು 8-10 ವರ್ಷ ಕಳೆದರು ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಇಲಾಖೆಯಿಂದ ಆಯಾ ಸಂಸ್ಥೆಗಳಿಗೆ ಹಣ ಪಾವತಿಯಾಗಿರುವ ದಾಖಲೆಗಳು ಲಭ್ಯವಾಗಿವೆ. ಪ್ರಗತಿಪರ ಸಂಘಟನೆಗಳು ಎಷ್ಟೆಲ್ಲಾ ಆರೋಪಿಸಿ ಹೋರಾಟ ಮಾಡಿದರು ಅವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕುವವರೆ ಇಲ್ಲವಾಗಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಅವೈಜ್ಞಾನಿಕ ಕಾಮಗಾರಿಗಳ ಅನುಷ್ಠಾನ, ಕಳಪೆ ಸಾಮಗ್ರಿ ಬಳಕೆ ಸೇರಿದಂತೆ ಕಾಮಗಾರಿಗಳ ಬಗ್ಗೆ ಅಪಸ್ವರ ಎತ್ತಿದರು ಕೂಡ ಹಣ ಖರ್ಚು ಹಾಕುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಿರಿಯ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಾರ್ಯನಿರ್ವಾಹಕ ಅಧಿಕಾರಿ, ನೋಡಲ್ ಅಧಿಕಾರಿ ಸೇರಿದಂತೆ ಆಯಾ ಇಲಾಖೆಗಳ ಅಧಿಕಾರಿಗಳು ಕೂಡ ನೋಡಿಯು ನೋಡದಂತೆ ಮೌನವಹಿಸಿರುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮೇಗಳಮನಿ ಸಮಗ್ರ ತನಿಖೆಗೆ ಆಗ್ರಹಪಡಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.