ADVERTISEMENT

ಖಾತರಿ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:14 IST
Last Updated 9 ಜನವರಿ 2014, 6:14 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಕಾಂಮಾಂಗೋ ಅಭಿಯಾನದ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಕೇಳುವ ಜಿಲ್ಲಾ ಮಟ್ಟದ ರೋಜಗಾರ ದಿನದ ಕುಂದು ಕೊರತೆ ಸಭೆಯಲ್ಲಿ ಗ್ರಾಕೂಸ್‌ ಸಂಘಟನೆ ಮುಖಂಡ ಅಭಯ ಮಾತನಾಡಿದರು. ಜಿಪಂ ಸಿಇಒ ವಿಜಯಾ ಜೋತ್ಸ್ನಾ ಇದ್ದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಕಾಂಮಾಂಗೋ ಅಭಿಯಾನದ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಕೇಳುವ ಜಿಲ್ಲಾ ಮಟ್ಟದ ರೋಜಗಾರ ದಿನದ ಕುಂದು ಕೊರತೆ ಸಭೆಯಲ್ಲಿ ಗ್ರಾಕೂಸ್‌ ಸಂಘಟನೆ ಮುಖಂಡ ಅಭಯ ಮಾತನಾಡಿದರು. ಜಿಪಂ ಸಿಇಒ ವಿಜಯಾ ಜೋತ್ಸ್ನಾ ಇದ್ದರು   

ರಾಯಚೂರು: ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಸಮ­ರ್ಪ­ಕವಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾ­ರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ­ನಿರ್ವಾಹಕ ಅಧಿಕಾರಿ ವಿಜಯಾ ಜೋತ್ಸ್ನಾ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕಾಂ ಮಾಂಗೋ ಅಭಿಯಾನದ ಕೆಲಸ ಕೇಳುವ ಜಿಲ್ಲಾ ಮಟ್ಟದ ರೋಜಗಾರ ದಿನ ಕುಂದು ಕೊರತೆ ಕುರಿತು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಕೇಳಲು ಬರುವ ಕಾರ್ಮಿಕರಿಗೆ ಕೆಲಸ ನೀಡಬೇಕು. ಆದರೆ, ಕೆಲಸ ಕೇಳುವ ಕೂಲಿಕಾರರನ್ನು ಅರ್ಜಿ ಸ್ವೀಕರಿ­ಸಿಬೇಕು. ಕೂಲಿಕಾರರ ಅರ್ಜಿ­ಯನ್ನು ತಿರ­ಸ್ಕರಿಸುವಂಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಸೆಂಬರ್ 5ರಿಂದ ಜನವರಿ 5ರವರೆಗಿನ ಒಂದು ತಿಂಗಳ ಕಾಲ ನಡೆದ ಕಾಂಮಾಂಗೋ ಅಭಿಯಾನದಡಿ ಜಿಲ್ಲೆಯ ಒಟ್ಟು 164 ಗ್ರಾಮ ಪಂಚಾಯಿತಿಗಳಲ್ಲಿ 656 ರೋಜಗಾರ ದಿವಸ ಅನುಷ್ಠಾನಗೊಳಿಸಬೇಕಾಗಿತ್ತು. ಆದರೆ, ಕೇವಲ 56 ರೋಜಗಾರ ದಿನವನ್ನು ಆಯೋಜಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ನಿಯಮಗಳನ್ನು ಉಲ್ಲಂಘನೆ ಮಾಡ­ಲಾಗಿದೆ ಎಂದು ಗ್ರಾಮೀಣ ಕೂಲಿ­ಕಾ­ರರ ಸಂಘಟನೆ(ಗ್ರಾಕೂಸ್) ಮುಖಂಡ ಅಭಯ ಅವರು ಸಭೆಗೆ ತಿಳಿಸಿದರು.

ಜಿಲ್ಲೆಯ 5 ತಾಲ್ಲೂಕಿನಗಳಲ್ಲಿ  32,240 ಕುಟುಂಬ ಜಾಬ್‌ ಕಾರ್ಡ್‌ ಇಲ್ಲದೇ ಅಭಿಯಾನದಿಂದ ಹೊರ ಉಳಿದಿದ್ದಾರೆ. ಮಾನ್ವಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 9, 553 ಕುಟುಂಬಗಳಿಗೆ ಉದ್ಯೋಗ ಚೀಟಿ(ಜಾಬ್ ಕಾರ್ಡ್‌) ನಿಂದ ವಂಚಿತಗೊಂಡಿದ್ದಾರೆ ಎಂದು ಹೇಳಿದರು.
ಒಂದು ತಿಂಗಳ ಈ ಆಂದೋಲನ­ದಲ್ಲಿ ಒಟ್ಟು 47, 217 ಕುಟುಂಬಗಳು ಉದ್ಯೋಗ ಕೋರಿ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ 5 ಸಾವಿರ ಕೂಲಿಕಾರರಿಗೆ ಉದ್ಯೋಗ ನೀಡುವ ಕಾರ್ಯ ಆರಂಭಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಮುಖ್ಯಕಾರ್ಯನಿರ್ವಾಹಕ ಅಧಿ­ಕಾರಿ ವಿಜಯಾ ಜೋತ್ಸ್ನಾ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಕಾರ್ಯನಿವಾಹಕ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಅರ್ಜಿ ತುಂಬಲು ಸಾಧ್ಯವಾಗದಂಥ ಕೂಲಿಕಾ­ರರಿಗೆ ಅರ್ಜಿಭರ್ತಿಮಾಡಿ ಸ್ವೀಕರಿಸಿದ ಕಂಪ್ಯೂಟರ್‌ನಲ್ಲಿ ದಾಖಲಿಸಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸದಂತೆ ಸೂಕ್ತ ಕ್ರಮ ಮುಂದಾಬೇಕು. ಯಾವುದೇ ಕಾರ­ಣಕ್ಕೂ ವಿಳಂಬ, ನಿರ್ಲಕ್ಷ್ಯ ವಹಿಸಬಾ­ರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾಧಿ­ಕಾರಿ ಡಾ.ರೋಣಿ, ಜಿಲ್ಲಾ ಯೋಜನಾ­ಧಿಕಾರಿ ಶರಣಬಸವ, ಗ್ರಾಕೂಸ್‌ ಸಂಘಟನೆಯ ಪದಾಧಿಕಾರಿಗಳಾದ ಶಿವಶರಣಗೌಡ, ವಿದ್ಯಾ, ಶರಣಮ್ಮ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.