ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಶೇ 50 ಹಿಂಗಾರು ಬಿತ್ತನೆ ಪೂರ್ಣಗೊಂಡಿದೆ. ಭೂಮಿ ಅಧಿಕ ತೇವಾಂಶದಿಂದ ಕೂಡಿರುವುದರಿಂದ ಬಿತ್ತನೆ ಕಾರ್ಯ ನಿಧಾನವಾಗಿ ಶುರುವಾಗಿ ದಿನ ಕಳೆದಂತೆ ಚುರುಕುಗೊಳ್ಳುತ್ತಿದೆ.
‘ಈ ಬಾರಿ ಮುಂಗಾರು ಮಳೆಗಳು ಕೊನೆಯವರೆಗೆ ಬಿದ್ದ ಕಾರಣ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಮಳೆ ಬಿಡುವು ನೀಡಿದ್ದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ’ ಎಂದು ಕೋಠಾ ಗ್ರಾಮದ ರೈತರ ಅಮರೇಶ ಹೇಳಿದರು.
‘ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.ಈ ಬಾರಿ ಮಳೆಯಿಂದ ಹೆಚ್ಚು ಹಾನಿಯಾಗದಿದ್ದರೆ ಅಷ್ಟೇ ಸಾಕು. ಬೆಳೆ ಹಾನಿಯಂತಹ ಸಮಸ್ಯೆ ತೋರದಿರಲಿ ಎಂದು ಅವರು ತಿಳಿಸಿದರು.
ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು ಹಿಂಗಾರು ಕ್ಷೇತ್ರ 21, 880 ಹೆಕ್ಟೇರ್ ಇದೆ. ಹಿಂಗಾರು ಹಂಗಾಮಿನಲ್ಲಿ ರೈತರು ಜೋಳ, ಕಡಲೆ, ಶೇಂಗಾ ಮತ್ತು ಗೋದಿ ಬಿತ್ತನೆ ಮಾಡುತ್ತಿದ್ದಾರೆ.
ಈಗಾಗಲೇ 6,750 ಹೆಕ್ಟೇರ್ ಕಡಲೆ, 3,220 ಹೆಕ್ಟೇರ್ ಜೋಳ, 1050 ಹೆಕ್ಟೇರ್ ಸೂರ್ಯಕಾಂತಿ ಹಾಗೂ 120 ಹೆಕ್ಟೇರ್ ಗೋದಿ ಬಿತ್ತನೆಯಾಗಿದೆ,11,140 ಹೆಕ್ಟೇರ್ ಬಿತ್ತನೆ ಕ್ಷೇತ್ರ ಉಳಿದಿದೆ. ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜೋಳದ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಕೇಂದ್ರದಲ್ಲಿ ಬೀಜದ ಕೊರತೆ ಇಲ್ಲ.
ಜೋಳ, ಕಡಲೆ ಮತ್ತು ಶೇಂಗಾ ಬೀಜಗಳ ದಾಸ್ತಾನು ಬೇಕಾದಷ್ಟು ಇದೆ. ರೈತರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ’ ಎಂದು ಗುರುಗುಂಟಾ ರೈತರ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಸ್.ಎಸ್. ಬಿರಾದರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.