ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಧಾರಕಾರ ಮಳೆಗೆ 50 ಮನೆಗಳು ಕುಸಿದಿವೆ. ಸೇತುವೆಗಳು ಮುಳುಗಡೆಯಾಗಿ 15 ಗ್ರಾಮಗಳ ಸಂಚಾರ ಕಡಿತಗೊಂಡು ಜನರು ಪರದಾಡುವಂತಾಗಿದೆ. ಜೇಗರಕಲ್–ಹೊಸಪೇಟೆ ಮಾರ್ಗದ ಸೇತುವೆ ಮುಳುಗಡೆಯಾದ ಕಾರಣ ತಿಮ್ಮಾಪುರ, ಹೆಂಬೆರಾಳ, ಜಿ.ಹನುಮಪುರ, ಮೀರಾಪುರ, ಜೆ.ಮಲ್ಲಾಪುರ, ಶ್ರೀನಿವಾಸಪುರ, ಮರ್ಚೇಡ್, ಕಾಡ್ಲೂರು, ಅರಷಣಗಿ, ಗ್ರಾಮಗಳ ರಸ್ತೆ ಸಂಚಾರ ಕಡಿತಗೊಂಡು ಜನರು ಪರದಾಡಿದರು.
ಮನ್ಸಲಾಪುರ–ಮರ್ಚೇಡ್ ಮಾರ್ಗದ ಹಳ್ಳ ಭರ್ತಿಯಾಗಿರುವುದರಿಂದ ಪಕ್ಕದ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣ ಸ್ಥಗಿತಗೊಂಡಿತ್ತು. ಮನ್ಸಲಾಪುರ–14, ಮರ್ಚೇಡ್–32, ಪಲ್ಕಂದೊಡ್ಡಿ, ಜೇಗರಕಲ್ ಗ್ರಾಮದಲ್ಲಿ ತಲಾ ಎರಡು ಹಳೆಯ ಮನೆಗಳು ಭಾಗಶಃ ಕುಸಿದಿದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳಾದ ತಿಪ್ಪಣ್ಣ, ಮಂಜುನಾಥ, ಮಲ್ಲಿಕಾರ್ಜುನ ಹೇಳಿದರು.
ಪತ್ತೆಪುರ ಗ್ರಾಮದ ಮನೆಗೆಳಿಗೆ ನೀರು ನುಗ್ಗಿದೆ. ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಸಜ್ಜೆ, ಭತ್ತ, ತೊಗರಿ,ಕಬ್ಬು, ಶೇಂಗಾ ಬೆಳೆಗಳು ಹಾನಿಯಾಗಿವೆ. ‘ಜನರ ಸಮಸ್ಯೆಗಳಿಗೆ ಸ್ಪಂದಿಸಿ’: ಕಚೇರಿಗಳಿಗೆ ಸೀಮಿತವಾಗದೆ, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ ತಿಪ್ಪರಾಜು ಹವಾಲ್ದಾರ ಹೇಳಿದರು.
ಮನ್ಸಲಾಪುರ– ಮರ್ಚೇಡ್ ಮಧ್ಯೆ ಇರುವ ಹಳ್ಳ ಮುಳುಗಡೆ ಆಗಿರುವ ಸ್ಥಳಕ್ಕೆ ಶನಿವಾರ ಸ್ಥಳಕ್ಕೆ ಭೇಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಮಳೆಯಿಂದ ಜಮೀನು ಜಲಾವೃತಗೊಂಡಿವೆ. ಕುಸಿತಗೊಂಡ ಮನೆಗಳ ಬಗ್ಗೆ, ಹಾಳಾದ ರಸ್ತೆಗಳು ಕುರಿತು ಕೃಷಿ, ಕಂದಾಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ವರದಿ ನೀಡಬೇಕು. ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕೆಂದು ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದರು.
ತಹಶೀಲ್ದಾರ್ ಶಿವಾನಂದ ಸಾಗರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಾಣೇಶ, ಮನ್ಸಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮರೆಡ್ಡಿ ಗೌಡ, ವಿವಿಧ ಇಲಾಖೆಯ ಅಧಿಕಾರಿಗಳಾದ ರವಿಪ್ರಸಾದ, ರಂಗಪ್ಪ, ಹನುಮೇಶ, ಮುಖಂಡರಾದ ಜಗದೀಶ ವಕೀಲ, ಶಂಕರಗೌಡ ಮಿರ್ಜಾಪುರ, ಈರಣ್ಣನಾಯಕ, ಶ್ರೀನಿವಾಸರೆಡ್ಡಿ, ಬಾಲರಾಜ ಕೊರ್ವಿಹಾಳ್, ಆಂಜನೇಯನಾಯಕ ಮನ್ಸಲಾಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.