ADVERTISEMENT

ನಾಳೆಯಿಂದ ಪ್ರಥಮ ಶೈಕ್ಷಣಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ರಾಯಚೂರು: ರಾಯಚೂರು ಜಿಲ್ಲಾ ಪ್ರೌಢ ಶಾಲಾ ಗಣಿತ ಮತ್ತು ವಿಜ್ಞಾನ ವಿಷಯ ಬೋಧಕರ ಜಿಲ್ಲಾ ಹಾಗೂ ತಾಲ್ಲೂಕು ವೇದಿಕೆ ಸಂಯುಕ್ತ ಆಶ್ರಯದಲ್ಲಿ ಇದೇ 3 ಮತ್ತು 4ರಂದು ಲಿಂಗಸುಗೂರು ತಾಲ್ಲೂಕಿ ಹಟ್ಟಿಯ(ಚಿನ್ನದ ಗಣಿ) ಸ್ವರ್ಣ ಭವನದಲ್ಲಿ ‘ಪ್ರಥಮ ಶೈಕ್ಷಣಿಕ ಸಮ್ಮೇಳನ-2010-11’ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 10ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಶಾನ್ಯ ವಲಯ ಹೆಚ್ಚುವರಿ ಆಯುಕ್ತ ಅಬ್ದುಲ್ ರಬ್ ಸಮ್ಮೇಳನ ಉದ್ಘಾಟಿಸುವರು. ಸ್ಮರಣೆ ಸಂಚಿಕೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ನಿರ್ದೇಶಕ ಕುಮುದಿನಿ ಭೈರಣ್ಣವರ್ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್ ನಾಗೂರ ವಹಿಸುವರು.

ಮಧ್ಯಾಹ್ನ 2.30ಕ್ಕೆ ಡಾ ಶರಣಬಸವ ಖೇಣೇದ ಅವರಿಂದ ಲೇಸರ್ ವಿಷಯ ಕುರಿತು, ಸಂಜೆ 4.15ಕ್ಕೆ ರಾಜ್ಯ ವಿಜ್ಞಾನ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ ಅವರಿಂದ ಆಹಾರ ಮತ್ತು ಆರೋಗ್ಯ ಕುರಿತು ವಿಶೇಷ ಉಪನ್ಯಾಸ ನೀಡುವರು.ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಕ ಶರಣಬಸಪ್ಪ ನಿರ್ದೇಶನದ ‘ಗೆಲಿಲಿಯೋ ವಿಜ್ಞಾನ ನಾಟಕ ಪ್ರದರ್ಶನಗೊಳ್ಳುವುದು.
 
4ರಂದು ಬೆಳಿಗ್ಗೆ ಹಟ್ಟಿ ಚಿನ್ನದ ಗಣಿ ಉಪ ವ್ಯವಸ್ಥಾಪಕ ಎಂ.ಎಲ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಚಿನ್ನದ ಗಣಿ ವೀಕ್ಷಣೆ. 11ಕ್ಕೆ  ಡಾ.ಸಿ.ವಿ ಯಳಮಗದ ಅವರಿಂದ ದೇಹದ ಹಾಗೂ ಜೀವನ ಸುತ್ತಲಿನ ರಸಾಯನಶಾಸ್ತ್ರದ ಕುರಿತು, ಮಧ್ಯಾಹ್ನ 12.30ಕ್ಕೆ  ದಾವಣಗೆರೆ ಅಧ್ಯಾಪಕ ಇಸ್ಮಾಯಿಲ್ ಅವರಿಂದ ‘ಎಸ್‌ಎಸ್‌ಎಲ್‌ಸಿ ಗಣಿತ ವಿಷಯದಲ್ಲಿ 40 ಅಂಕಗಳನ್ನು ಸುಲಭವಾಗಿ ಗಳಿಸುವ ಬೋಧನೆ ವಿಧಾನ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.

ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಂಕಲಿ ಸುಕ್ಷೇತ್ರಮಠದ ವೀರಭದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಅಧ್ಯಕ್ಷತೆಯನ್ನು ತಾಲ್ಲೂಕು ಗಣಿತ ವಿಜ್ಞಾನ ವೇದಿಕೆ ಅಧ್ಯಕ್ಷ ನಾಗನಗೌಡ ಪಾಟೀಲ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.