ADVERTISEMENT

ಬಯಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:05 IST
Last Updated 20 ಜೂನ್ 2011, 9:05 IST
ಬಯಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು
ಬಯಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು   

ಮಸ್ಕಿ: ಪಟ್ಟಣಕ್ಕೆ ಸಮೀಪವಿರುವ ಮಾರಲದಿನ್ನಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಪ್ರವಾಸಿ ಮಂದಿರದ ಬಯಲಿನಲ್ಲಿ ಓದುತ್ತ, ಪಾಠ ಕೇಳುತ್ತ ಕಾಲ ಕಳೆಯುತ್ತಿದ್ದಾರೆ.
 
ಪ್ರಸಕ್ತ ವರ್ಷ 8ರಿಂದ 10ನೇ ತರಗತಿಯವರೆಗೆ 90 ವಿದ್ಯಾರ್ಥಿಗಳು ಓದುತ್ತಿದ್ದಾರೆ. 8ಜನ ಶಿಕ್ಷಕರು ಪ್ರವಾಸಿ ಮಂದಿರದ ಕಾರಿಡಾರ್, ಬಯಲಿನಲ್ಲಿ ಪಾಠ ಮಾಡುತ್ತಿರುವ ದುಸ್ಥಿತಿ ಬಂದೊದಗಿದೆ.

2009ರ ಫೆಬ್ರವರಿಯಲ್ಲಿ ನೂತನ ಶಾಲಾ ಕಟ್ಟಡ ಕಟ್ಟಲು ಸರ್ಕಾರ 18 ಲಕ್ಷ ರೂಪಾಯಿ ಮಂಜೂರು ಮಾಡಿದ್ದು 4 ಶಾಲಾ ಕೊಠಡಿಗಳನ್ನು ಒಂದು ವರ್ಷದಲ್ಲಿ ಮುಗಿಸಲು ನಿರ್ಮಿತಿ ಕೇಂದ್ರಕ್ಕೆ ಸರ್ಕಾರ ಗಡುವ ನೀಡಿದೆ. ಆದರೆ ಮೂರು ವರ್ಷವಾದರೂ ಕೊಠಡಿ ನಿರ್ಮಾಣ ಮಾಡಿದ್ದಾರಾಗಲಿ ಇನ್ನು ರಸ್ತೆ, ಕಾಂಪೌಂಡ್ ಪೂರ್ಣಗೊಳಿಸಿಲ್ಲ.

ಪ್ರಸಕ್ತ ವರ್ಷ ನೂತನವಾಗಿ ನಿರ್ಮಿಸಿದ ಶಾಲೆಯಲ್ಲಿ ತರಗತಿಗಳನ್ನು ಆರಂಭಿಸಬೇಕೆಂದರೆ ನಿರ್ಮಿತಿ ಕೇಂದ್ರದವರು ಕಟ್ಟಡವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಬಯಲಿನಲ್ಲಿ ಓದುವಂತಾಗಿದೆ. ಈ ವರ್ಷ ನಾವು ಹೊಸ ಶಾಲೆಗೆ ಹೋಗುತ್ತೇವೆ ಎಂಬ ಕನಸು ಕಂಡಿದ್ದೆವು. ಆದರೆ ಹೊಸ ಶಾಲೆ ಉದ್ಘಾಟನೆಯಾಗದಿರುವುದಕ್ಕೆ ಮತ್ತೆ ಬಯಲಿನಲ್ಲಿ ಓದುವಂತಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ನೂತನವಾಗಿ ನಿರ್ಮಿಸಿದ ಶಾಲೆಗೆ ಹೋಗಬೇಕಾದ ಮಾರ್ಗದಲ್ಲಿ ಜಾಲಿಗಿಡಗಳು ಬೆಳೆದಿವೆ. ಶಾಲೆಯ ಮುಂಬಾಗದಲ್ಲಿ ನೆಲ ಸಮತಟ್ಟು ಇಲ್ಲದೆ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಲು ತೊಂದರೆಯಾಗುವುದರಿಂದ ನೆಲ ಸಮತಟ್ಟು ಮಾಡಿ ರಸ್ತೆ ನಿರ್ಮಿಸಬೇಕೆಂದು ಗ್ರಾಮದ ಗ್ಯಾನಪ್ಪ ಅಭಿಪ್ರಾಯಪಟ್ಟರು.

ಆಗಿನ ಲಿಂಗಸುಗೂರು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ 2007-08ನೇ ಸಾಲಿನಲ್ಲಿ ಮಾರಲದಿನ್ನಿ ಗ್ರಾಮಕ್ಕೆ ಪ್ರೌಢಶಾಲೆಗೆ ಸರ್ಕಾರದಿಂದ ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣವಾಗುವರೆಗೆ ಪ್ರವಾಸಿ ಮಂದಿರದಲ್ಲಿ ಶಾಲೆ ನಡೆಯಲಿ ಎಂದು ಆರಂಭಿಸಿದರು. 2009ರಲ್ಲಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ನೂತನ ಕಟ್ಟಡಕ್ಕೆ ಭೂಮಿಪೂಜೆ ಮಾಡಿದರು.

ಅತಿ ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಶಾಲೆ ಆರಂಭಿಸುವುದಾಗಿ ಹೇಳಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್,ನಾಗೂರು ಕಳೆದ ಮೂರು ವರ್ಷಗಳಿಂದ ಹಲವಾರು ಬಾರಿ ಶಾಲೆಗೆ ಭೇಟಿ ನೀಡಿದ್ದರೂ ಕಟ್ಟಡ ಮುಗಿಸುವಲ್ಲಿ ನಿರ್ಮಿತಿ ಕೇಂದ್ರದವರ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆಂದು ನಾಗರಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.