ADVERTISEMENT

ಬಸ್‌ ಸಂಚಾರಕ್ಕೆ ಚಾಲನೆ

ಜೆ–ನರ್ಮ್‌ ಯೋಜನೆ– 15 ಮಿನಿ ಬಸ್‌: ಸಂಸದ

​ಪ್ರಜಾವಾಣಿ ವಾರ್ತೆ
Published 9 ಜೂನ್ 2015, 7:34 IST
Last Updated 9 ಜೂನ್ 2015, 7:34 IST
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಜೆ–ನರ್ಮ್‌ ಯೋಜನೆಯಡಿ ಮಂಜೂರಾದ ನಗರ ಸಾರಿಗೆ ಬಸ್‌ಗಳಿಗೆ  ಸಂಸದ ಬಿ. ವಿ. ನಾಯಕ ಚಾಲನೆ ನೀಡಿದರು
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಜೆ–ನರ್ಮ್‌ ಯೋಜನೆಯಡಿ ಮಂಜೂರಾದ ನಗರ ಸಾರಿಗೆ ಬಸ್‌ಗಳಿಗೆ ಸಂಸದ ಬಿ. ವಿ. ನಾಯಕ ಚಾಲನೆ ನೀಡಿದರು   

ರಾಯಚೂರು: ಕೆಂದ್ರ ಸರ್ಕಾರದ ಜೆ-–ನರ್ಮ್‌ ಯೋಜನೆಯಡಿ ನಗರ ಸಾರಿಗೆ ಸಂಚಾರಕ್ಕೆ ಮಂಜೂರಾದ 15 ಹೆಚ್ಚುವರಿ ಮಿನಿ ಬಸ್‌ಗಳಿಗೆ ಸಂಸದ ಬಿ.ವಿ. ನಾಯಕ ಸೋಮವಾರ ಚಾಲನೆ ನೀಡಿದರು.

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ರಾಯಚೂರು ವಿಭಾಗ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಮಾತನಾಡಿ, ರಾಯ ಚೂರು ನಗರಕ್ಕೆ 35 ಹಾಗೂ ಸಿಂಧನೂರು ನಗರಕ್ಕೆ 20 ಬಸ್‌ಗಳನ್ನು ಮಂಜೂರು ಮಾಡುವ ಮೂಲಕ ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಹುಬ್ಬಳಿ–ಧಾರವಾಡ ಮಾದರಿಯಲ್ಲಿ ನಗರ ಸಾರಿಗೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.

ನಗರದ ಆಯ್ದ ಸ್ಥಳಗಳಲ್ಲಿ ಬಸ್‌ ಶೆಲ್ಟರ್‌ಗಳ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಉದ್ದೇಶವಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಸ್ಲಂಗಳಲ್ಲಿರುವ ಬಡ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್‌ ಸಂಚಾರಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.

ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ,ನಗರೋತ್ಥಾನ ಯೋಜನೆಯಡಿ ಮಂಜೂರಾದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕಾಗಿದ್ದು ನೇತಾಜಿ ನಗರ ರಸ್ತೆ ಮತ್ತು ಗಂಗಾನಿವಾಸ ರಸ್ತೆ ಅಭಿವೃದ್ಧಿ ಕಾರ್ಯ ಆರಂಭಗೊಂಡಿದೆ. ಜಿಲ್ಲಾಧಿಕಾರೊಂದಿಗೆ ಸೇರಿಕೊಂಡು ಮಸೀದಿ ಮಂದಿರಗಳ ತೆರುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಪ್ರಯಾಣಿಕರಿಗೆ ಅನುಕೂಲವಾಗಲು ಬೆಂಗಳೂರಿಗೆ ಕರುಣಾ ಸ್ಲೀಪರ್‌ 2 ಬಸ್‌ಗಳನ್ನು ಒದಗಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ಸಬರ್‌ನನ್‌ ವ್ಯವಸ್ಥೆ ಕಡಿಮೆ ದರದಲ್ಲಿ ಹಳ್ಳಿಗಳಿಗೆ ನಗರಸಾರಿಗೆ ಮಾಡಲಾಗುತ್ತದೆ ಎಂದರು.

ಬಸ್‌ಗಳ ವಿವರ: ರೈಲ್ವೆ ನಿಲ್ದಾಣದಿಂದ ವಾಸವಿ ನಗರಕ್ಕೆ 10 ಮತ್ತು ನವೋದಯ ಆಸ್ಪತ್ರೆಯಿಂದ ಯರಮರಸ್‌ವರೆಗೆ 10 ಬಸ್‌ಗಳು ಸಂಚಾರ ಮಾಡುತ್ತಿದ್ದು ಈ ಹೊಸ ಬಸ್‌ಗಳಲ್ಲಿ ರೈಲ್ವೆ ನಿಲ್ದಾಣದಿಂದ ನೀಲಕಂಠೇಶ್ವರ ನಗರ 3ಬಸ್‌ ಮತ್ತು ಯಕ್ಲಾಸಪೂರದಿಂದ ನವೋದಯ ದಂತ ವೈದ್ಯಕೀಯ ಕಾಲೇಜಿಗೆ 3 ಬಸ್‌ಗಳ ಸಂಚಾರ ಆರಂಭಿಸಲಾಯಿತು.

ನವೋದಯದಿಂದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 2, ರೈಲ್ವೆ ನಿಲ್ದಾಣದಿಂದ ಯರಮರಸ್‌ನ ದಂಡ್‌ಗೆ 1, ರೈಲ್ವೆ ನಿಲ್ದಾಣದಿಂದ ಆಶ್ರಯ ಕಾಲೊನಿಗೆ 2 ಮತ್ತು ರಾಂಪೂರದಿಂದ ವಾಸವಿನಗರಕ್ಕೆ 4 ಬಸ್‌ ಸಂಚಾರ ಮಾಡಲಿವೆ. ಒಟ್ಟಾರೆ ನಗರದಲ್ಲಿ 35 ಬಸ್‌ಗಳ ನಗರ ಸಾರಿಗೆ ಸಂಚಾರ ಆರಂಭವಾಯಿತು.

32 ಆಸನಗಳ ವ್ಯವಸ್ಥೆಯಿರುವ ಬಸ್‌ನಲ್ಲಿ ಎಲ್‌ಇಡಿ ನಾಮಫಲಕ, ಜಿಪಿಆಸ್‌ ಆಧಾರಿತ ಪ್ರಚಾರ ವ್ಯವಸ್ಥೆ, ಸಿಸಿ ಟಿವಿ ಕ್ಯಾಮೆರಾ ಸೇರಿದಂತೆ ಹಲವು ತಾಂತ್ರಿಕ ವ್ಯವಸ್ಥೆ ಒದಗಿಸಲಾಗಿದೆ.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಾಣಾಧಿಕಾರಿ ಸಂತೋಷ ಕುಮಾರ, ನಗರಸಭೆ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷೆ ಪದ್ಮಾ ಜಿಂದಪ್ಪ, ನಗರಸಭೆ ಸದಸ್ಯರಾದ ಸೀಮಾ ಸದಾಫ್‌, ಪಿ.ಯಲ್ಲಪ್ಪ ಮೊದಲಾದವರು  ಕಾರ್ಯಕ್ರಮದಲ್ಲಿ ಇದ್ದರು.

ಮುಖ್ಯಾಂಶಗಳು
* ಸಮೀಪದ ಹಳ್ಳಿಗಳಿಗೂ ನಗರ ಸಾರಿಗೆ ವ್ಯವಸ್ಥೆ
* ಹುಬ್ಬಳಿ–ಧಾರವಾಡ ಮಾದರಿಸಬರ್‌ಬನ್‌ ವ್ಯವಸ್ಥೆ
* ನಗರ ಸಾರಿಗೆ ಸೇವೆಗೆ 35 ಬಸ್‌ಗಳು

ನಗರಕ್ಕೆ ಸಂಪರ್ಕ ಕಲ್ಪಿಸುವ ಹೊರ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಾರಂಭವಾಗಿದೆ.
ಡಾ. ಶಿವರಾಜ ಪಾಟೀಲ, ನಗರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT