ADVERTISEMENT

ಬಾಬರಿ ಮಸೀದಿ ಮರು ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:32 IST
Last Updated 7 ಡಿಸೆಂಬರ್ 2013, 6:32 IST

ರಾಯಚೂರು:ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇರುವ ಮೂಲ ಸ್ಥಳದಲ್ಲಿಯೇ ಪುನಃ ಮರು ಬಾಬರಿ ಮಸೀದಿ ನಿರ್ಮಾಣ ಮಾಡಬೇಕು, ಬಾಬರಿ ಮಸೀದಿ ಧ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಟಿಪ್ಪು ಸುಲ್ತಾನ್ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಮುಸ್ಲಿಂ ಬಾಂಧವರು ಶಾಂತಿಯುತ ಪ್ರತಿಭಟನಾ ಮೆರವ­ಣಿಗೆ ನಡೆಸಿದರು.

ನಗರದ ಜಮೀಯಾ ಮಸೀದಿ­ಯಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಮುಸ್ಲಿಂ ಬಾಂಧವರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಜಿಲ್ಲಾಡಳಿತ ಕಚೇರಿ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನ . 1527ರಲ್ಲಿ ಮೊಘಲ್ ಮಹಾರಾಜ ಬಾಬರ ನಿರ್ಮಿಸಿದ ಮಸೀದಿ ಇದಾಗಿದ್ದು, ಉತ್ತರ ಪ್ರದೇಶ ಫೈಜಾಬಾದ್ ಜಿಲ್ಲೆಯ ಅಯೋಧ್ಯೆಯಲ್ಲಿದೆ. ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ಮಸೀದಿ ಧ್ವಂಸಗೊಳಿಸಿ ಮುಸ್ಲಿಂ ಬಾಂಧವರ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಮೂಲ ಸ್ಥಳದ­ಲ್ಲಿಯೇ ಪುನಃ ಬಾಬರಿ ಮಸೀದಿ ನಿರ್ಮಾಣ ಮಾಡಬೇಕು. ಪ್ರಜಾ­ಪ್ರಭುತ್ವ ವ್ಯವಸ್ಥೆ, ಜಾತ್ಯತೀತ ರಾಷ್ಟ್ರದ ನಂಬಿಕೆ, ತತ್ವ ಉಳಿಸಿ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೇ, ಅಲ್ಪಸಂಖ್ಯಾತರ ಮೇಲಿನ ದಾಳಿ, ಕೋಮುಗಲಭೆ ನಡೆಯದಂತೆ ತಡೆಗಟ್ಟಬೇಕು ಎಂದೂ ಮನವಿ ಪತ್ರದಲ್ಲಿ ಕೋರಿದ್ದಾರೆ.

ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮಹಮ್ಮದ್ ಅಬ್ದುಲ್ ಹೈ ಫಿರೋಜ್, ಉಪಾಧ್ಯಕ್ಷ ಅಮೀರ್ ಬೇಗ್, ಪ್ರಧಾನ ಕಾರ್ಯದರ್ಶಿ ಝಹೀರ್ ಅಹಮ್ಮದ್, ನಗರ ಘಟಕ ಅಧ್ಯಕ್ಷ ಶೇಖ್ ಮಾಸೂಮ್, ನಗರ ಘಟಕ ಉಪಾಧ್ಯಕ್ಷ ಸೈಯದ್ ದಸ್ತಗೀರ್,  ಮಹಮ್ಮದ್ ಅಜೀಮುದ್ದೀನ್ ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.