ADVERTISEMENT

ಬಿತ್ತನೆ ಬೀಜ ವಿತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:35 IST
Last Updated 19 ಅಕ್ಟೋಬರ್ 2012, 5:35 IST

ಜಾಲಹಳ್ಳಿ: ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಸೇಂಗಾ ಬಿತ್ತನೆ ಮಾಡಲು ರೈತರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಇಲ್ಲಿಯವರೆಗೂ ಸರ್ಕಾರದಿಂದ ನೀಡಬೇಕಾದ ರಿಯಾಯತಿ ದರದ ಶೇಂಗಾ ಬೀಜಗಳು ನೀಡಿಲ್ಲ.

ಇದರಿಂದಾಗಿ ಅನೇಕ ರೈತರು ದುಬಾರಿ ವೆಚ್ಚದಲ್ಲಿ ಬೀಜ ಖರೀದಿಸಿ ಬಿತ್ತನೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಬರುವ ರೈತರ ಹೊಲಗಳಿಗೆ ಕಳೆದ ವರ್ಷ ಒಂದೇ ಬೆಳೆಗೆ ನೀರು ಹರಿಸಿರುವ ಹಿನ್ನೆಲೆಯಲ್ಲಿ  ಈ ವರ್ಷವೂ ಅದೇ ಸ್ಥಿತಿ ಮುಂದುವರೆಯಬಹುದು ಎಂಬ ಆತಂಕದಲ್ಲಿ ರೈತರು ಬಿಜಾಪೂರು ಹಾಗೂ ಚಳ್ಳಿಕೆರೆ ಕಡೆಗಳಿಂದ ದುಬಾರಿ ಬೆಲೆಗೆ ಬೀಜ ಖರೀದಿಸಲು ಮುಂದಾಗಿದ್ದಾರೆ.

ಮುಂಗಾರು ಬೆಳೆಗಳಾದ ಸಜ್ಜೆ, ಸೂರ್ಯಕಾಂತಿ, ಹೆಸರು ಬೆಳೆಗಳನ್ನು ಬೆಳೆದು ಹಿಂಗಾರು ಬೆಳೆಗಳ ಬೆತ್ತನೆಗಾಗಿ ಭೂಮಿಯನ್ನು ಹದಮಾಡಿಟ್ಟುಕೊಂಡಿದ್ದಾರೆ. ಈ ಭಾಗದಲ್ಲಿ ಕೆಂಪುಮಣ್ಣು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಸೇಂಗಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಕೂಡಲೇ ಸರ್ಕಾರ ಗಮನಹರಿಸಿ ಶೇಂಗಾ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ರೈತ ಸೇವಾ ಸಹಕಾರ ಸಂಘದ ನಿರ್ದೇಶಕ ಮುದ್ದಪ್ಪ ಬಂಡಿ ಮನವಿ ಮಾಡಿದ್ದಾರೆ.

ಬೀಜ ವಿತರಣೆಗೆ ಕ್ರಮ: ತಾಲ್ಲೂಕಿನಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದು ರೈತರಿಗೆ ಅವಶ್ಯಕವಾದ ಬಿತ್ತನೆ ಬೀಜಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಮಹಾದೇವಪ್ಪ ತಿಳಿಸಿದ್ದಾರೆ. ಶೇಂಗಾ ಬಿತ್ತನೆಗೆ ನವೆಂಬರ್ 20 ರವರೆಗೆ ಕಾಲಾವಕಾಶವಿದ್ದು ರೈತರು ಆತಂಕ ಪಡುವ ಅಗತ್ಯವಿಲ್ಲ. ನವೆಂಬರ್ ಮೊದಲನೇ ವಾರದಲ್ಲಿಯೇ ಬೀಜ ವಿತರಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.