ADVERTISEMENT

`ಮತದಾನ ಹೆಚ್ಚಳ ಮುಖ್ಯ ಗುರಿ'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 7:19 IST
Last Updated 2 ಏಪ್ರಿಲ್ 2013, 7:19 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಅವರು ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಹಾಗೂ ಮತದಾನ ಪ್ರಕ್ರಿಯೆ ಪಾಲ್ಗೊಳ್ಳುವಿಕೆ ಕುರಿತ `ಸ್ವೀಪ್' ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ವಿವಿಧ ಇಲಾಖೆ ಅಧಿಕಾರಿಗಳು ಇದ್ದಾರೆ
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಅವರು ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಹಾಗೂ ಮತದಾನ ಪ್ರಕ್ರಿಯೆ ಪಾಲ್ಗೊಳ್ಳುವಿಕೆ ಕುರಿತ `ಸ್ವೀಪ್' ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ವಿವಿಧ ಇಲಾಖೆ ಅಧಿಕಾರಿಗಳು ಇದ್ದಾರೆ   

ರಾಯಚೂರು: ಜಿಲ್ಲೆಯಲ್ಲಿ ಮತದಾರರ ನೋಂದಣಿ ಹಾಗೂ ಮತದಾನದ ಪ್ರತಿಶತ ಹೆಚ್ಚಿಸಲು ಮತ್ತು  ಯಾವುದೇ ಆಮಿಷಕ್ಕೊಳಗಾಗದೇ ನಿರ್ಭಯದಿಂದ ಮತ ಚಲಾಯಿಸುವಂತೆ ಮತದಾರರಿಗೆ ಮಾಹಿತಿ ನೀಡುವುದು ಸ್ವೀಪ್ (ಸಿಸ್ಟೆಮ್ಯೋಟಿಕ್ ವೋಟರ್ಸ್‌ ಎಜ್ಯುಕೇಶನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್ ಪ್ಲಾನ್)  ಕಾರ್ಯಕ್ರಮದ ಉದ್ದೇಶವಾಗಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಹೇಳಿದರು.

ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮತದಾರರು ಸಮೀಪದ ತಹಸೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ತಮ್ಮ ಹೆಸರನ್ನು ಪರಿಶೀಲಿಸಬೇಕು. ಒಂದು ವೇಳೆ ಹೆಸರು ಮತದಾರರ ಯಾದಿಯಲ್ಲಿ ಸೇರಿರದಿದ್ದಲ್ಲಿ ಹೆಸರನ್ನು ಸೇರಿಸಬೇಕು. ಅಲ್ಲದೇ ಹೆಸರು ಬದಲಾವಣೆ, ಮತಗಟ್ಟೆ ಬದಲಾವಣೆ ಈ ಎಲ್ಲ ಕಾರ್ಯಗಳನ್ನು  ಏಪ್ರಿಲ್ 7 ರೊಳಗೆ ಮಾಡಿಕೊಳ್ಳುವಂತೆ ಮತದಾರರಲ್ಲಿ ಮನವಿ ಮಾಡಿದರು.

ಭಾರತ ಚುನಾವಣಾ ಆಯೋಗವು ಮತದಾರರಿಗೆ ಅರಿವು ಮೂಡಿಸಲು ಹೊರ ತಂದಿರುವ ಜಾಹೀರಾತುಗಳನ್ನು ಎಲ್ಲ ಚಲನಚಿತ್ರ ಮಂದಿರಗಳು, ಕೇಬಲ್ ಟಿ.ವಿ.ಗಳಲ್ಲಿ ಪ್ರಸಾರ ಮಾಡಬೇಕು. ಮೊಬೈಲ್ ಸೇವೆ ನೀಡುವ ಕಂಪನಿಗಳು ಮತದಾನದ ಕುರಿತು ಎಸ್.ಎಂ.ಎಸ್. ಗಳನ್ನು ಕಳುಹಿಸಬೇಕು. ಬಿ.ಎಸ್.ಎನ್.ಎಲ್.ನವರು ಮತದಾನದ ಮಾಹಿತಿಯನ್ನು ಡಯಲ್ ಟೋನಿನಲ್ಲಿ ಅಳವಡಿಸಬೇಕು. ಪದವಿ ಕಾಲೇಜುಗಳಲ್ಲಿ ಮತದಾನದ ಕುರಿತು ಜಾಥಾ, ಮ್ಯೋರಾಥಾನ್, ಸೈಕಲ್ ರೇಸ್‌ಗಳಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಜ್ಙಾನಪ್ರಕಾಶ , ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ.ಬಿಸ್ನಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ, ಸಹಾಯಕ ಆಯುಕ್ತೆ ಮಂಜುಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.