ದೇವದುರ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ಬೇಸರವಾಗಿದ್ದು, ಮತದಾರರು ಚುನಾವಣೆಯ ದಾರಿ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮುಂಬ್ಟರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆಯುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಎಂದು ಆಂಧ್ರ ಪ್ರದೇಶದ ಮಾಜಿ ಸಚಿವ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿರುವ ಚನ್ನಾರೆಡ್ಡಿ ಹೇಳಿದರು.
ಪಟ್ಟಣದ ಎಪಿಎಂಸಿ ಅವರಣದಲ್ಲಿ ಗುರುವಾರ ಮುಂಬರುವ ವಿಧಾನಸಭಾ ಚುನಾವಣೆ ಪೂರ್ವ ಸಿದ್ಧತೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಕ್ಷದ ಅಭ್ಯರ್ಥಿ ಆಯ್ಕೆ ಬಗ್ಗೆ ಹಿಂದಿನ ಸಂಪ್ರದಾಯವನ್ನು ಕೈಬಿಟ್ಟು ಒಂದು ವರ್ಷದ ಮೊದಲೆ ಅಭ್ಯರ್ಥಿಯ ಆಯ್ಕೆ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಿಸಿರುವುದರಿಂದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಮೂರು ಲೋಕಸಭಾ ಹಾಗೂ ಇವುಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 24 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ಹೈಕಮಾಂಡ್ ನನ್ನಗೆ ಜವಾಬ್ದಾರಿ ನೀಡಿದೆ ಎಂದರು.
ಸ್ಥಳೀಯವಾಗಿ ಯಾವ ಅಭ್ಯರ್ಥಿ ಹೆಸರನ್ನು ಸೂಚಿಸಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬ ಬಗ್ಗೆ ಯಾವುದೇ ಸಂದೇಹ ಇಲ್ಲದೆ ಅಭಿಪ್ರಾಯ ತಿಳಿಸುವ ಜತೆಗೆ ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು ಎಲ್ಲವನ್ನು ಹೈಕಮಾಂಡ್ ಗಮನಕ್ಕೆ ತರುವ ಮೂಲಕ ಒಟ್ಟಾರೆ ಪಕ್ಷದ ಬೆಳವಣಿಗೆ ಮುಖ್ಯವಾಗಿದೆ ಎಂದರು.
ನಾಲ್ಕು ಅರ್ಜಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ವತಿಯಿಂದ ನಾಲ್ಕು ಜನರು ಅಭ್ಯರ್ಥಿ ಆಕಾಂಕ್ಷಿಗಳಾಗಿ ಬಿ.ವಿ. ನಾಯಕ, ವೇಣಗೋಪಾಲ ಜಾಲಹಳ್ಳಿ, ಬಸ್ಸಯ್ಯ ಸಾಕೆ ಮತ್ತು ಕರಿಯಮ್ಮ ಅವರು ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಂಸದ ಎ.ವೆಂಕಟೇಶ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ, ರಾಜ್ಯ ಮುಖಂಡರಾದ ರಾಜಶೇಖರ ಮೇಣಸಿನಕಾಯಿ, ಬಾಬಜಾನ್, ಜಿಲ್ಲಾ ಅಧ್ಯಕ್ಷ ಎ. ವಸಂತಕುಮಾರ, ಪಕ್ಷದ ಅಧ್ಯಕ್ಷರಾದ ಬಸ್ಸಯ್ಯ ಸಾಕೆ, ಭೀಮನಗೌಡ ನಾಗಡದಿನ್ನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಕ್ಕಮಹಾದೇವಿ ರವಿರಾಜ ಪಾಟೀಲ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಕರಿಯಮ್ಮ ಗೋಪಾಲಕೃಷ್ಣ, ಮಾಜಿ ಜಿಪಂ ಅಧ್ಯಕ್ಷ ರಾಮಣ್ಣ ಇರಬಗೇರಾ, ಯುವ ಘಟಕದ ಅಧ್ಯಕ್ಷ ಶೇಖ್ ಮುನ್ನಾಬಾಯಿ, ಉಪಾಧ್ಯಕ್ಷ ಲಕ್ಷ್ಮಣ ಜ್ಯೋತಿ, ಮುಖಂಡರಾದ ರಾಜಶೇಖರ ನಾಯಕ, ಫಜಲ್ಲುಲ್ ಜಾಜೀದ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.