ADVERTISEMENT

ವೈದ್ಯರ ಎರವಲು ಸೇವೆ ರದ್ದತಿಗೆ ಆಗ್ರಹಿಸಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:55 IST
Last Updated 17 ಸೆಪ್ಟೆಂಬರ್ 2011, 6:55 IST

ಸಿಂಧನೂರು: `ತಾಲ್ಲೂಕಿನ ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಗುರುರಾಜ ದೇಸಾಯಿ ಅವರನ್ನು ಬೇರೆಡೆಗೆ ಎರವಲು ನೀಡಿ ಬೇರೊಬ್ಬ ವೈದ್ಯರನ್ನು ನೇಮಕ ಮಾಡಿರುವ ಸರ್ಕಾರದ ಧೋರಣೆ ಸರಿಯಲ್ಲ~ ಎಂದು ಗ್ರಾಮದ ಸರ್ವೋದಯ ಯುವಕ ಮಂಡಳ, ಮಲ್ಲನಗೌಡ ಸ್ಮಾರಕ ಯುವಕ ಮಂಡಳಿ, ಡಾ.ಅಂಬೇಡ್ಕರ ಯುವಕ ಮಂಡಳಿ ಹಾಗೂ ವೀರಶೈವ ಯುವಕ ಮಂಡಳಿಯ ಪದಾಧಿಕಾರಿಗಳು ಈಚೆಗೆ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

`ಪ್ರಸ್ತುತ ನೇಮಕ ಮಾಡಿರುವ ವೈದ್ಯರು ಮಾದಕ ವ್ಯಸನಿಯಾಗಿದ್ದು ಆಸ್ಪತ್ರೆಯಲ್ಲಿಯೇ ಮಲಗಿ ಬಿಡುತ್ತಾರೆ. ರೋಗಗಳು ಬಂದರೆ ಸರಿಯಾಗಿ ಉಪಚಾರ ನೀಡುವುದಿಲ್ಲ. ರಾತ್ರಿ ಸಮಯದಲ್ಲಿ ಡ್ರಗ್ ಸೇವಿಸಿ ಊರೆಲ್ಲ ತಿರುಗುತ್ತಾರೆ. ಆದ್ದರಿಂದ ಅವರ ಸೇವೆಯನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆದುಕೊಳ್ಳುವಂತೆ ಉದ್ರಿಕ್ತ ಯುವಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಾಲಿ ವೈದ್ಯರನ್ನು ಮರಳಿ ಕರೆಯಿಸಿಕೊಳ್ಳುವವರೆಗೆ ಮುತ್ತಿಗೆ ಹಿಂತೆಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದರು. ಅಲ್ಲದೇ ಮೊದಲಿನಂತೆ ವೈದ್ಯ ಗುರುರಾಜ ದೇಸಾಯಿ ಅವರನ್ನು ಸೇವೆಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿದರು.

ಮಧ್ಯಾಹ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪುನಃ ಗುರುರಾಜ ದೇಸಾಯಿ ಅವರನ್ನೇ ಸೇವೆಯಲ್ಲಿ ಮುಂದುವರಿಸುವುದಾಗಿ ಭರವಸೆ ನೀಡಿದ್ದರಿಂದ ಯುವಕ ಮಂಡಳಿಗಳ ಸದಸ್ಯರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಮುತ್ತಿಗೆ ಕಾರ್ಯಕ್ರಮವು ಬಸವಲಿಂಗಪ್ಪ ಪಲ್ಲೇದ ಅವರ ನೇತೃತ್ವದಲ್ಲಿ ನಡೆಯಿತು. ನೂರಾರು ಯುವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.