ADVERTISEMENT

ಶೌಚಾಲಯ ನಿರ್ಮಿಸಲು ಜಾಗೃತಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 7:00 IST
Last Updated 13 ಜುಲೈ 2012, 7:00 IST

ರಾಯಚೂರು: ಪ್ರತಿ ಕುಟುಂಬ ವರ್ಗವು ಶೌಚಾಲಯ ನಿರ್ಮಿಸಿಕೊಂಡು ಉಪಯೋಗಿಸುವುದರಿಂದ ಆರೋಗ್ಯ ಸಂರಕ್ಷಣೆ, ಉತ್ತಮ ಪರಿಸರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಅಭಿವೃದ್ಧಿ ಕಾರ್ಯಚಟುವಟಿಕೆಯಲ್ಲಿ ಜನಜಾಗೃತಿ ಕಾರ್ಯವನ್ನು ಗ್ರಾಮೀಣ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಕೈಗೊಂಡಲ್ಲಿ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಜೈನ್ ಹೇಳಿದರು.

ರಾಯಚೂರು ತಾಲ್ಲೂಕಿನ ಬಾಪೂರ ಗ್ರಾಮದಲ್ಲಿ ಗುರುವಾರ ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ರಾಯಚೂರಿನ ಸ್ಪ್ರೆಡ್ ಸಂಸ್ಥೆಯ ಪರಿಶುದ್ಧ ಯೋಜನೆಯಡಿ ನಿರ್ಮಿಸಿದ ಶೌಚಾಲಯಗಳ ಗ್ರಾಮಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಶೌಚಾಲಯಗಳಿಲ್ಲದೇ ಇರುವುದು, ಅದರಲ್ಲೂ ಮಹಿಳೆಯರಿಗೆ ಶೌಚಾಲಯಗಳಿಲ್ಲದೇ ಇರುವುದು ಸಮಾಜಕ್ಕೆ ಕಳಂಕ. ಈ ಸ್ಥಿತಿ ಬದಲಾಗಬೇಕು. ಶೌಚಾಲಯ ನಿರ್ಮಾಣ ಮಾಡಿ ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯಯುತ ವಾತಾವರಣದಲ್ಲಿ ಜನತೆ ಬದುಕು ಸಾಗಿಸಬೇಕು ಎಂದು ಹೇಳಿದರು.

ಸ್ಪ್ರೆಡ್ ಸಂಸ್ಥೆಯು ಈ ದಿಶೆಯಲ್ಲಿ ಜಾಗೃತಿ ಮೂಡಿಸಿ ಶೌಚಾಲಯ ನಿರ್ಮಾಣ ಆಗುವಲ್ಲಿ ಮಾಡಿದ ಪ್ರಯತ್ನ ಪ್ರಶಂಸನೀಯ ಎಂದು ತಿಳಿಸಿದರು.

ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಜನಜಾಗೃತಿ ಮತ್ತು ಶೌಚಾಲಯ ನಿರ್ಮಿಸಿಕೊಡುವಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದರೆ ಗ್ರಾಮಿಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಹುಮಾನಕ್ಕೆ ಶಿಫಾರಸು ಮಾಡಿಸುವ ಪ್ರಯತ್ನ ಮಾಡಲಾಗುವುದು. ಅನುದಾನ ದೊರಕಿಸುವಲ್ಲಿಯೂ ಪ್ರಯತ್ನಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಸಿಂಗನೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕನಗೌಡ ಅತಿಥಿಯಾಗಿದ್ದರು. ಅಧ್ಯಕ್ಷತೆಯನ್ನು ಸ್ಪ್ರೆಡ್ ಸಂಸ್ಥೆಯ ಅಧ್ಯಕ್ಷ ಆನಂದ ಪಾಟೀಲ್, ಸ್ಪ್ರೆಡ್ ಸಂಸ್ಥೆಯ ಕ್ಷೇತ್ರ ಅಧಿಕಾರಿಗಳಾದ ಅಮರೇಶ, ಸ್ಪ್ರೆಡ್ ಸಂಸ್ಥೆ ಕಾರ್ಯದರ್ಶಿ ಕೆ ಶರಣಬಸವ ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.