ADVERTISEMENT

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:00 IST
Last Updated 2 ಅಕ್ಟೋಬರ್ 2012, 5:00 IST
ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ
ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ   

ರಾಯಚೂರು: ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಒತ್ತಾಯಿಸಿ ಆರ್‌ಟಿಪಿಎಸ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಭೇಟಿ ಮಾಡಿದ ಬಳಿಕ ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕರನ್ನು ಸ್ಥಳಕ್ಕೆ ಬರಮಾಡಿಕೊಂಡು ಮನವಿಯನ್ನು ಸೋಮವಾರ ಕೊಡಿಸಿದ್ದಾಗಿ ಶಾಸಕ ಸಯ್ಯದ್ ಯಾಸಿನ್ ಹೇಳಿದ್ದಾರೆ.

ಆರ್‌ಟಿಪಿಎಸ್ ಕೇಂದ್ರವು ವಿದ್ಯುತ್ ಉತ್ಪಾದನೆ ಮಾಡಿ ಎಲ್ಲ ಕಡೆ ಸರಬರಾಜು ಮಾಡುವುದಕ್ಕೋಸ್ಕರ ಕೆಪಿಟಿಸಿಎಲ್‌ಗೆ ಕೊಡುತ್ತದೆ. ಅದು ನೇರವಾಗಿ ಯಾವುದೇ ಕಡೆ ಸರಬರಾಜು ಮಾಡುವುದಿಲ್ಲ.  ಕೆಪಿಟಿಸಿಎಲ್ ಸರಬರಾಜು ಮಾಡಬೇಕು.
 
ಕೆಪಿಟಿಸಿಎಲ್‌ನವರು ಜಿಲ್ಲೆಯ ವಿದ್ಯುತ್ ಬೇಡಿಕೆ 120 ಮೆಗಾವಾಟ್ ಪ್ರಕಾರ ವಿದ್ಯುತ್ ಸರಬರಾಜು ಮಾಡುತ್ತಿಲ್ಲ.  ಕೇವಲ 50ರಿಂದ 60 ಮೆಗಾವಾಟ್ ಪೂರೈಕೆ ಮಾಡುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಕೇವಲ 3 ತಾಸು ವಿದ್ಯುತ್ ಕೊಡುತ್ತಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಷ್ಣಾ ನದಿಯಿಂದ ನಗರಕ್ಕೆ ಪೂರೈಕೆಯಾಗುವ ನೀರು ಸರಬರಾಜು ಮಾಡುತ್ತಿರುವ ಜಾಕ್‌ವೆಲ್ ಪಂಪ್‌ಹೌಸ್‌ಗೆ ವಿದ್ಯುತ್ ಸರಬರಾಜು ಆಗುತ್ತಿರುವ ವಿದ್ಯುತ್ ಲೈನ್ ಮತ್ತು ಕಂಬಗಳು ಬಿದ್ದು ವಿದ್ಯುತ್ ಪೂರೈಕೆಗೆ ತೊಂದರೆ ಆಗಿತ್ತು. ಈ ಬಗ್ಗೆ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಮನಕ್ಕೆ ತಂದಿದ್ದರಿಂದ ಚಿಕ್ಕಸುಗೂರಿನಲ್ಲಿರುವ ಜಾಕ್‌ವೆಲ್‌ಗೆ ತಡೆರಹಿತ ವಿದ್ಯುತ್ ಸರಬರಾಜು ಮಾಡುತ್ತಿರುವ ಸಬ್ ಸ್ಟೇಶನ್‌ಗೆ ಹೋಗಿ ಪರಿಶೀಲನೆ ಮಾಡಿ ನಂತರ ಜೆಸ್ಕಾಂ ಎಂಜಿನಿಯರ್ ಅವರ ಗಮನಕ್ಕೆ ತಂದು  ಸರಿಪಡಿಸಲು ತಿಳಿಸಿದ್ದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.