ರಾಯಚೂರು: ‘ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೀಟುಗಳ ದೊರೆಯಲು ಸಂವಿಧಾನ 371(ಜೆ) ಅನುಕೂಲವಾಗಿದೆ’ ಎಂದು ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಹೇಳಿದರು.
ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಕಾಲೇಜಿನ ಆಡಿಟೋರಿಯಂ (ಸಭಾಂಗಣ)ನಲ್ಲಿ ಶನಿವಾರ ಆಯೋಜಿಸಿದ್ದ ರಿಮ್ಸ್ನ 10ನೇ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರಿಮ್ಸ್ ಮಹಾವಿದ್ಯಾಲಯದ ವೈದ್ಯಕೀಯ ಪದವಿಯಲ್ಲಿ ರ್ಯಾಂಕ್ ಬಂದಿರುವುದು ಅಭಿನಂದನಾರ್ಹ ವಾಗಿದೆ’ ಎಂದರು.
‘ರಾಯಚೂರು ಜಿಲ್ಲೆಯ ಅಭಿವೃದ್ಧಿ ಹೊಂದಿರುತ್ತಿರುವುದು ಸಂತಸ ತಂದಿದೆ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಸಾಕಷ್ಟು ಪರಿಶ್ರಮವೂ ಅಡಗಿರುತ್ತದೆ. ಅಲ್ಲದೇ ತಂದೆ ತಾಯಿಗಳ ಪ್ರೋತ್ಸಾಹವೂ ಮಹತ್ವದ ಪಾತ್ರವಹಿಸುತ್ತದೆ. ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಮುಂದಿನ ವೃತ್ತಿ ಜೀವನದಲ್ಲಿಯೂ ನಕ್ಷತ್ರವಾಗಿ ಮಿಂಚುವಂತಾಗಬೇಕು’ ಎಂದರು.
ಈ ಹಿಂದೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಲಬುರಗಿ ಯಲ್ಲಿ ಮಾತ್ರ ವೈದ್ಯಕೀಯ ಮಹಾವಿದ್ಯಾಲಯ ಇತ್ತು. ಈಗ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್) ಮಹಾವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಈ ಸಂಸ್ಥೆಯ ಅತ್ಯಾಧುನೀಕ ಉಪಕರಣಗಳೊಂದಿಗೆ ಅಭಿವೃದ್ಧಿ ಹೊಂದಿರುವುದು ಸಂಸತ ತಂದಿದೆ ಎಂದರು.
ರಾಷ್ಟ್ರೀಯ ಮಳೆಯಾತ್ಕ ಪ್ರದೇಶ ಪ್ರಾಧಿಕಾರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಮಾತನಾಡಿ, ‘ವೃತ್ತಿಯಲ್ಲಿರುವ ವೈದ್ಯರಿಗೆ ಮಾನವೀಯತೆ ಗುಣಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ’ ಎಂದು ತಿಳಿಸಿದರು.
ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪೂರ, ಆಡಳಿತ ಮಂಡಳಿ ಸದಸ್ಯರಾದ ಎಚ್.ಎ.ನಾಡಗೌಡ, ರಾಜೇಂದ್ರ ಶಿವಾಳೆ, ಲೀಲಾ ಮಲ್ಲಿಕಾರ್ಜುನ, ರಿಮ್ಸ್ ಪ್ರಾಚಾರ್ಯ ಡಾ.ಬಸವರಾಜ ಎಂ.ಪಾಟೀಲ, ಶಸ್ತ್ರಚಿಕಿತ್ಸಕ ಡಾ.ವಿಜಯ ಶಂಕರ, ಒಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ. ನಾಗರಾಜ ವಿ.ಗದ್ವಾಲ್, ರಿಮ್ಸ್ನ ಆರ್ಥಿಕ ಸಲಹೆಗಾರರ ಹನುಮೇಶ, ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಮಹೆಬೂಬ್ ಜಿಲಾನಿ, ಡಾ.ರಾಜಶೇಖರ, ಡಾ. ರಾಧ ಸಂಘಾವಿ, ಡಾ.ಪ್ರವೀಣ ಪಾಟೀಲ್ ಹಾಗೂ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಹಾಗೂ ಮತ್ತಿತರರು ಇದ್ದರು.
ವೈದ್ಯಕೀಯ ವಿದ್ಯಾರ್ಥಿನಿ ಡಾ.ತೇಜಸ್ವಿನಿ ಎಸ್.ಆರ್, ಭಾಷಾ ಮತ್ತಿತರರನ್ನು ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಲಾಯಿತು. ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಭಾಸ್ಕರ್ ಕೆ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.