ADVERTISEMENT

ರಾಯಚೂರು: ಜಿಲ್ಲೆಯಲ್ಲಿ 25 ಮಂದಿಗೆ ಕೋವಿಡ್‌ ದೃಢ

ಮತ್ತೆ 21 ಜನರು ಗುಣಮುಖ, ಪ್ರತಿದಿನವೂ ಪಾಸಿಜಿವ್‌ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 13:41 IST
Last Updated 10 ಜುಲೈ 2020, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 25 ಜನರಿಗೆ ಕೋವಿಡ್‌ ದೃಢವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರೆ, 21 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು, ಸಿಂಧನೂರಿನಲ್ಲಿ 9 ಹಾಗೂ ದೇವದುರ್ಗದಲ್ಲಿ ಒಂದು ಪ್ರಕರಣ ಪಾಜಿಟಿವ್‌ ಇದೆ. ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್‌ ದೃಢವಾದವರ ಸಂಖ್ಯೆ ಒಟ್ಟು 656 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 186 ರಷ್ಟಿದೆ. ಅದರಲ್ಲಿ 125 ಸೋಂಕಿತರು ಓಪೆಕ್‌ ಆಸ್ಪತ್ರೆಯಲ್ಲಿದ್ದಾರೆ. 61 ಜನರನ್ನು ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ.

ಮತ್ತೊಂದು ಸಾವು: ರಾಯಚೂರಿನ ಹರಿಜನವಾಡಾದ ನಿವಾಸಿ ನರಸಮ್ಮ (55) ಅವರು ಕೋವಿಡ್‌ನಿಂದ ಮೃತಪಟ್ಟಿದ್ದು, ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರು ಒಟ್ಟು ಏಳು ಮಂದಿ.

ADVERTISEMENT

ಜಿಲ್ಲೆಯ ವಿವಿಧೆಡೆ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ 135 ಜನರನ್ನು ಇರಿಸಲಾಗಿದೆ. ಶುಕ್ರವಾರ ಮತ್ತೆ 577 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಪ್ರಯೋಗಾಲಯದಿಂದ ಒಟ್ಟು 2,663 ಮಾದರಿಗಳ ವರದಿ ಬರಬೇಕಿದೆ. ಪ್ರತಿದಿನ 300 ರಿಂದ 400 ವರೆಗೂ ವರದಿಗಳು ಬರುತ್ತಿವೆ.

ಜಿಲ್ಲೆಯಲ್ಲಿ ಕೋವಿಡ್‌ ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗುವುದು ಹಾಗೂ ಗುಣಮುಖರಾದವರು ಆಸ್ಪತ್ರೆಯಿಂದ ಹೊರಬರುವುದು ನಿತ್ಯದ ಕ್ರಮವಾಗಿ ಪರಿಣಮಿಸಿದೆ. ಪ್ರತಿ ಹಂತದಲ್ಲೂ ಅಧಿಕಾರಿಗಳು ಮತ್ತು ವೈದ್ಯಕೀಯ ಇಲಾಖೆಯ ವೈದ್ಯರು, ಸಿಬ್ಬಂದಿ ಕೋವಿಡ್‌ ರೋಗ ನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣ ಆಗುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಅಧಿಕಾರಿಗಳು, ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ವಾಸ್ತವದಲ್ಲಿ ಕೊರೊನಾ ಸೋಂಕು ವಿಸ್ತರಿಸುತ್ತಲೇ ಇದೆ.

ಈ ಮೊದಲು ಹೊರ ಜಿಲ್ಲೆಗಳು, ಹೊರರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಎಲ್ಲಿಯೂ ಪ್ರಯಾಣಿಸದಿರುವ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿರುವವರಲ್ಲಿಯೂ ಕೋವಿಡ್‌ ದೃಢವಾಗುತ್ತಿದೆ. ಸಮುದಾಯದಲ್ಲೂ ಕೋವಿಡ್‌ ಸೋಂಕು ವ್ಯಾಪಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.