ADVERTISEMENT

ಕೆಲವೆಡೆ ಗಲಾಟೆ: ಜಿಲ್ಲೆಯಲ್ಲಿ ಶೇ 67.71 ಮತದಾನ

ಜಿಲ್ಲೆಯ ಏಳು ನಗರ ಸಂಸ್ಥೆಗಳಿಗೆ ನಡೆದ ಚುನಾವಣೆ, ಪೊಲೀಸರಿಂದ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:18 IST
Last Updated 31 ಆಗಸ್ಟ್ 2018, 15:18 IST
ರಾಯಚೂರಿನ ವಾರ್ಡ್‌ ಸಂಖ್ಯೆ 15 ರಲ್ಲಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಮಹಿಳೆಯರು ಸರದಿಯಲ್ಲಿ ನಿಂತಿದ್ದರು
ರಾಯಚೂರಿನ ವಾರ್ಡ್‌ ಸಂಖ್ಯೆ 15 ರಲ್ಲಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಮಹಿಳೆಯರು ಸರದಿಯಲ್ಲಿ ನಿಂತಿದ್ದರು   

ರಾಯಚೂರು: ಜಿಲ್ಲೆಯ ಏಳು ನಗರ ಸಂಸ್ಥೆಗಳಿಗೆ ನಡೆದ ಮತದಾನದ ವೇಳೆಯಲ್ಲಿ ಕೆಲವೆಡೆ ಗಲಾಟೆಗಳು ನಡೆದಿದ್ದು, ಪೊಲೀಸರು ಕೂಡಲೇ ಎಚ್ಚೆತ್ತುಕೊಂಡಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವಂತಾಯಿತು. ಆದರೆ, ಮತದಾನಕ್ಕೆ ಯಾವುದೇ ಅಡೆತಡೆಯಾಗಲಿಲ್ಲ.

ರಾಯಚೂರು ನಗರಸಭೆ, ಸಿಂಧನೂರು ನಗರಸಭೆ ಮತ್ತು ಮಾನ್ವಿ ಪುರಸಭೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಗಲಾಟೆಗಳು ನಡೆದಿವೆ. ಬಡಾವಣೆಗಳಲ್ಲಿ ಜಟಾಪಟಿ ನಡೆಯುವ ಸಾಧ್ಯತೆಯನ್ನು ಅರಿತಿದ್ದ ಪೊಲೀಸರು ಮುನ್ನಚ್ಚರಿಕೆ ಕ್ರಮವಾಗಿ ಸಾಕಷ್ಟು ಬಂದೋಬಸ್ತ್‌ ಏರ್ಪಡಿಸಿದ್ದರು.

ಸಿಂಧನೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರ ಪುತ್ರ ಅಭಿಷೇಕ ವಿರುದ್ಧ ಬಸವರಾಜ ಎನ್ನುವ ಯುವಕ ಪೊಲೀಸರಿಗೆ ದೂರು ನೀಡಿರುವ ಪ್ರಸಂಗ ಶುಕ್ರವಾರ ಸಂಜೆ ನಡೆಯಿತು. ವೃದ್ಧೆಯೊಬ್ಬರನ್ನು ಮತಗಟ್ಟೆಗೆ ಕರೆದುಕೊಂಡು ಬಂದಿದ್ದ ಬಸವರಾಜ, ಮತದಾನ ಮಾಡಿಸಿ ವಾಪಸ್‌ ಕರೆದುಕೊಂಡು ಹೋಗುವಾಗ ಅಭಿಷೇಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್‌ ಮುಖಂಡರಾದ ಹಂಪನಗೌಡ ಬಾದರ್ಲಿ, ವಿರೂಪಕ್ಷಪ್ಪ ಸೇರಿದಂತೆ ಹಲವು ಕಾಂಗ್ರೆಸ್‌ ಕಾರ್ಯಕರ್ತರು ಬಸವರಾಜ ಜೊತೆಯಲ್ಲಿ ಪೊಲೀಸ್‌ ಠಾಣೆಗೆ ಬಂದು, ಯುವಕ ನೀಡುವ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಕೋರಿದರು.

ADVERTISEMENT

ರಾಯಚೂರಿನಲ್ಲಿ ಗಲಾಟೆ: ನಗರಸಭೆ ವಾರ್ಡ್ ಸಂಖ್ಯೆ 26 ಮತ್ತು 18 ರಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ವಾದ್ವಾದ ನಡೆದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಅಭ್ಯರ್ಥಿಗಳನ್ನು ಸಮಾಧಾನಪಡಿಸಿ ವಾತಾವರಣ ಹತೋಟಿಗೆ ತಂದರು.
ವಾರ್ಡ್ ಸಂಖ್ಯೆ 26 ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯರಾಜ ಮೋತಾ ಮತ್ತು ಪಕ್ಷೇತರ ಅಭ್ಯರ್ಥಿ ರಾಜಗೋಪಾಲ ಅವರು ಮತಗಟ್ಟೆಯಲ್ಲಿಯೇ ಗಲಾಟೆ ಆರಂಭಿಸಿದ್ದರು. ಇದರಿಂದ ಕೆಲಕಾಲ ಮತದಾನ ಸ್ಥಗಿತವಾಗಿತ್ತು.

ವಾರ್ಡ್ ಸಂಖ್ಯೆ 18 ರಲ್ಲಿ ಪಕ್ಷೇತರ ಮಹಿಳಾ ಅಭ್ಯರ್ಥಿ ಸಂಬಂಧಿ ಎ. ಮಾರೆಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಲಲಿತಾ ಕಡಗೋಲ ಅವರ ಪತಿ ಆಂಜೀನೆಯ ಅವರ ಮಧ್ಯೆ ವಾಗ್ವಾದ ನಡೆಯಿತು. ಮತಗಟ್ಟೆ ಪಕ್ಕದಲ್ಲಿದ್ದ ಬೆಂಬಲಿಗರು ಕೂಡಾ ಪರಸ್ಪರ ವಾಗ್ವಾದ ಆರಂಭಿಸಿದ್ದರು. ಪೊಲೀಸರು ಎಲ್ಲರನ್ನು ಚದುರಿಸಲು ಲಾಠಿ ಕೈಗೆ ತೆಗೆದುಕೊಳ್ಳಬೇಕಾಯಿತು. ಆದರೆ ಪರಿಸ್ಥಿತಿ ಹತೋಟಿಗೆ ಬಂದಿದ್ದರಿಂದ ಲಾಠಿ ಪ್ರಹಾರ ಮಾಡುವುದು ತಪ್ಪಿತು. ಆದರೆ, ಮತದಾನ ಮುಗಿದ ಬಳಿಕೂ ಜವಾಹರ ನಗರದಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮತ್ತೆ ಘರ್ಷಣೆ ನಡೆಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.