ರಾಯಚೂರು:ಎಚ್ಐವಿ ಹರಡದಂತೆ ಅಥವಾ ಸೋಂಕು ತಾಗದಂತೆ ಎಚ್ಚರವಾಗಿರುವುದೇ ಜಾಣತನ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನಕುಮಾರ್ ಹೇಳಿದರು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ನಿಂದ ಗುರುವಾರ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡುವ ಪೂರ್ವ ಮಾತನಾಡಿದರು.
ಏಡ್ಸ್ ಸೋಂಕು ಅಮಾನವೀಯವಾದದ್ದು. ಕಾಲೇಜಿನ ವಿದ್ಯಾರ್ಥಿನಿಯರು ನಗರದ ಜನತೆಗೆ ಸೂಕ್ತ ಅರಿವು ಮೂಡಿಸುವಲ್ಲಿ ಶ್ರಮವಹಿಸಬೇಕು ಎಂದರು.
ಜಾಥಾದ ನೇತೃತ್ವ ವಹಿಸಿದ್ದ ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಮಾತನಾಡಿ, ವಿದ್ಯಾರ್ಥಿನಿಯರು ಜಾಥಾದುದ್ದಕ್ಕೂ ನಾಗರಿಕರಲ್ಲಿ ಎಚ್ಐವಿ ಏಡ್ಸ್ ಹರಡದಂತೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಬೇಕು. ಈ ವರ್ಷದ ಘೋಷವಾಕ್ಯವಾದ ‘ಸಮಾನಗೊಳಿಸು‘ ಅಂದರೆ ಎಚ್ಐವಿ ಏಡ್ಸ್ ಪೀಡಿತರನ್ನು ಪ್ರತ್ಯೇಕ ದೃಷ್ಟಿಕೋನದಿಂದ ನೋಡದೆ ಅವರೂ ಸಹ ಎಲ್ಲರಂತೆ ಮಾನವರು ಎಂಬ ಸಂದೇಶವನ್ನು ಸಾರುವಂತೆ ಮತ್ತು ಎಚ್ಐವಿ ಏಡ್ಸ್ ಹರಡುವಿಕೆಯನ್ನು ಕೊನೆಗೊಳಿಸುವಲ್ಲಿ ಜಾಗೃತರಾಗಿರುವಂತೆ ಸಂದೇಶ ನೀಡಿರಿ ಎಂದು ಕರೆಕೊಟ್ಟರು.
ಜಾಗೃತಿ ಜಾಥಾವು ಕಾಲೇಜಿನಿಂದ ಆರಂಭಗೊಂಡು ಏಡ್ಸ್ ಸೊಂಕದಿರಲಿ - ಬಾಳು ಬಂಗಾರವಾಗಲಿ, ಏಡ್ಸ್ ಸೊಂಕಿತರೂ - ನಮ್ಮಂತೆ ಮಾನವರು, ನಮ್ಮ ಪ್ರೀತಿಯೇ - ಏಡ್ಸ್ ಪೀಡಿತರ ಆತ್ಮಶಕ್ತಿ, ಮುಂದೆ ಸಾಗಿರಿ - ಏಡ್ಸ್ ಕೊನೆಗೊಳಿಸಿರಿ ಎಂಬ ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ಬೀದಿಗಳ ಮೂಲಕ ಹಾದು ತಿಮ್ಮಾಪುರಪೇಟೆ ಮಾರ್ಗವಾಗಿ ಸಾಗಿ ಬಿ ಆರ್ ಬಿ ಕಾಲೇಜು ವೃತ್ತದಲ್ಲಿ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತಿ ಜಾಥಾದಲ್ಲಿ ವಿಲೀನವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.