
ಸಿಂಧನೂರು: ‘ಮನುಷ್ಯನ ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ರಕ್ತಹೀನತೆಗೆ ಕಾರಣವಾಗಿದೆ’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಹೇಳಿದರು.
ಇಲ್ಲಿನ ಬಡಿಬೇಸ್ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆರೋಗ್ಯವಂತ ತಾಯಿ ಆರೋಗ್ಯವಂತ ಮಗು’ ಅಭಿಯಾನ ಅಂಗವಾಗಿ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.
‘ಎಲ್ಲ ವಯಸ್ಸಿನವರು ತಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಿ ಕಬ್ಬಿಣಾಂಶದ ಫೋಲಿಕ್ ಆಮ್ಲ ಮಾತ್ರೆ ಹಾಗೂ ಬಿ12 ವಿಟ್ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ತಪ್ಪದೇ ಸೇವಿಸಬೇಕು. ಗರ್ಭಿಣಿಯರು 2ನೇ ತ್ರೈಮಾಸಿಕದಲ್ಲಿ ಜಂತುಹುಳು ನಿವಾರಕ ಮಾತ್ರಗಳ ಜೊತೆಯಲ್ಲಿ ಶೇಂಗಾ, ಎಳ್ಳು, ಬೆಲ್ಲ, ಹಸಿರು ತರಕಾರಿ, ಖರ್ಜುರಾ, ಒಣ ದ್ರಾಕ್ಷಿ ಸೇವನೆ ಮಾಡುವುದರಿಂದ ದೇಹದಲ್ಲಿ ಉಂಟಾಗುವ ಹಲವು ತೊಂದರೆಗಳನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.
‘ಎಲ್ಲ ಗರ್ಭಿಣಿಯರು ಐರನ್ ಫೋಲಿಕ್ ಆಮ್ಲದ ಮಾತ್ರೆಯನ್ನು ಪ್ರತಿದಿನ ಒಂದರಂತೆ ಐದು ತಿಂಗಳವರೆಗೆ ಕಡ್ಡಾಯವಾಗಿ ಸೇವಿಸಬೇಕು. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ಹಿಮೋಗ್ಲೊಬಿನ್ ಪರೀಕ್ಷೆ ಮಾಡಿಕೊಳ್ಳಬೇಕು. ಬಯಲಿನಲ್ಲಿ ಮಲ ವಿಸರ್ಜನೆ ಮಾಡಬಾರದು, ಶೌಚಾಲಯ ಬಳಸಬೇಕು. ಸಾಬೂಬುನಿಂದ ಕೈ ಕಾಲುಗಳನ್ನು ತೊಳೆದುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಿದರೆ ರೋಗಗಳಿಂದ ದೂರವಿರಬಹುದು’ ಎಂದು ತಿಳಿಸಿದರು.
‘ಮಹಿಳೆಯರಲ್ಲಿ ಮುಟ್ಟಿನ ವೇಳೆ ಅತಿಯಾದ ರಕ್ತಸ್ರಾವಾಗುತ್ತದೆ. ಗರ್ಭಿಣಿಯರಲ್ಲಿ ರಕ್ತಹೀನತೆಯ ಪರಿಣಾಮ ಕಡಿಮೆ ತೂಕದ ಮಗು ಜನಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗರ್ಭಿಣಿಯರ ರಕ್ತಹೀನತೆ ವರ್ಗೀಕರಣ 11 ಗ್ರಾಂ ಇರಬೇಕು. 7ಕ್ಕಿಂತ ಕಡಿಮೆಯಿದ್ದರೆ ಹೆಚ್ಚಿನ ಚಿಕಿತ್ಸೆ ಪಡೆಯಬೇಕು. ಪೌಷ್ಟಿಕ ಆಹಾರದ ಸೇವನೆ ಬಹಳ ಮುಖ್ಯವಾಗಿದೆ’ ಎಂದು ಹೇಳಿದರು.
ಪಿಎಚ್ಸಿಒ ಶಮೀನಾ, ಆಶಾ ಕಾರ್ಯಕರ್ತೆ ಶೈನಜಾ, ಅಂಗನವಾಡಿ ಕಾರ್ಯಕರ್ತೆ ದಿಲ್ಶಾದ್, ಅಂಗನವಾಡಿ ಸಹಾಯಕಿ ಸಾವಿತ್ರಿ ಹಾಗೂ ಗರ್ಭಿಣಿ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.