ADVERTISEMENT

ಅಂಗನವಾಡಿ ಕೇಂದ್ರ ಶಿಥಿಲ: ಆತಂಕದಲ್ಲಿ ಮಕ್ಕಳು

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 16:33 IST
Last Updated 26 ಜುಲೈ 2023, 16:33 IST
ದೇವದುರ್ಗ ತಾಲ್ಲೂಕಿನ ಕ್ಯಾದಿಗೇರಾ ಗ್ರಾಮದ ಮೂರನೇ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಕುಳಿತ ಮಕ್ಕಳು
ದೇವದುರ್ಗ ತಾಲ್ಲೂಕಿನ ಕ್ಯಾದಿಗೇರಾ ಗ್ರಾಮದ ಮೂರನೇ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಕುಳಿತ ಮಕ್ಕಳು   

ದೇವದುರ್ಗ: ತಾಲ್ಲೂಕಿನ ಕ್ಯಾದಿಗೇರಾ ಗ್ರಾಮದ ಅಂಗನವಾಡಿ ಕೇಂದ್ರ 2 ಕಟ್ಟಡ ಶಿಥಿಲಾವಸ್ಥೆ ತಲುಪಿದೆ.ಸುಮಾರು 20 ವರ್ಷದ ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಚಾವಣಿ ಮತ್ತು ಗೋಡೆ ಬಿರುಕು ಬಿಟ್ಟಿದೆ. ಮಳೆ ಬಂದಾಗ ಕೇಂದ್ರದ ಒಳಗೆ ನೀರು ತೊಟ್ಟಿಕ್ಕುತ್ತದೆ.

ಮಳೆಯಿಂದಾಗಿ ಕಟ್ಟಡದೊಳಗೆ ಸಂಗ್ರಹಗೊಳ್ಳುವ ನೀರನ್ನು ನಿತ್ಯ ಹೊರ ಚೆಲ್ಲಿ ಸ್ವಚ್ಛಗೊಳಿಸಿ ಮಕ್ಕಳನ್ನು ಕೂರಿಸಬೇಕಾಗಿದೆ ಎಂದು ಅಂಗನವಾಡಿ ಸಿಬ್ಬಂದಿ ಅಳಲು ತೋಡಿಕೊಂಡರು.

ಗ್ರಾಮದಲ್ಲಿ 6 ತಿಂಗಳ ಹಿಂದೆ ನಡೆದ ತಾಲ್ಲೂಕಿನ ಪ್ರಥಮ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಕಟ್ಟಡ ನಿರ್ಮಾಣಕ್ಕೆ ಮುಂದಾಗುತಿಲ್ಲ. ಕಟ್ಟಡ ಶಿಥಿಲಗೊಂಡ ಹಿನ್ನೆಲೆ ಗ್ರಾಮದ ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. 

ADVERTISEMENT

ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಕೇಂದ್ರದಲ್ಲಿ ನೀರು ನಿಲ್ಲುವುದರಿಂದ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದು,  ಕೂಡಲೇ ಅಂಗನವಾಡಿ ಕೇಂದ್ರವನ್ನು ಸುಸಜ್ಜಿತವಾದ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.

’ಕಟ್ಟಡ ಶಿಥಿಲಗೊಂಡ ಬಗ್ಗೆ ಮಾಹಿತಿ ಇದೆ. ಭೇಟಿ ನೀಡಿ ಕಟ್ಟಡವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಾಲ್ಲೂಕು ಶಿಶು ಯೋಜನಾಭಿವೃದ್ಧಿ ಅಧಿಕಾರಿ ವೆಂಕಟಪ್ಪ ತಿಳಿಸಿದರು.

ದೇವದುರ್ಗ ತಾಲ್ಲೂಕಿನ ಕ್ಯಾದಿಗೇರಾ ಗ್ರಾಮದ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಶಿಥಿಲಗೊಂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.