ರಾಯಚೂರು: ಸರ್ಕಾರಿ ನೌಕರರ ಎನ್ಪಿಎಸ್ ಸಂಘದ ಜಿಲ್ಲಾ ಘಟಕ, ಕೃಷಿ ವಿಶ್ವವಿದ್ಯಾಲಯ ಶಿಕ್ಷಕ, ಶಿಕ್ಷಕೇತರ ನೌಕರರ ಸಂಘದಿಂದ ಅಕ್ಟೋಬರ್ 5ರಂದು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ, ನೌಕರರ, ಸಂಘಟನಕಾರರ ಪ್ರಶಸ್ತಿ ಪ್ರದಾನ ಸಮಾರಂಭ, ಜ್ಯೋತಿ ಸಂಜೀವಿನಿ ಕಾರ್ಡ್ ವಿತರಣೆ ಹಾಗೂ ಎಸ್ಎಂಎಸ್ ಮೂಲಕ ವೇತನ ಪಾವತಿ ಸಂದೇಶ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತದೆ ಸಂಘದ ಅಧ್ಯಕ್ಷ ಮಹಾಂತೇಶ ಬಿರಾದಾರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 1500 ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಎಚ್ಆರ್ಎಂಎಸ್ನಿಂದ ವೇತನ ಪಾವತಿಯ ಮಾಹಿತಿಯನ್ನು ಮೊಬೈಲ್ಗೆ ಸಂದೇಶ ರವಾನಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ನೌಕರರನ್ನು ಹಾಗೂ ಸಂಘಟನೆಗೆ ಶ್ರಮಿಸಿದವರನ್ನು ಗುರುತಿಸಿ ಗೌರವಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಸುರೇಶಕುಮಾರ ನೆರವೇರಿಸಲಿದ್ದು, ಸರ್ವಪಲ್ಲಿ ರಾಧಾಕೃಷ್ಣ ಭಾವಚಿತ್ರಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಮಾಲಾರ್ಪಣೆ ಮಾಡಲಿದ್ದಾರೆ. ಶಾಸಕ ಬಸನಗೌಡ ದದ್ದಲ ಜ್ಯೋತಿ ಸಂಜೀವಿನಿ ಕಾರ್ಡಗಳನ್ನು ವಿತರಣೆ ಮಾಡಲಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ ವೇತನದ ಸಂದೇಶ ರವಾನಿಸುವ ಎಸ್ಎಂಎಸ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸಿ.ಬಿ.ವೇದಮೂತಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ನಂದೀಶ ರಾಂಪೂರು, ಪ್ರಸನ್ನಕುಮಾರ, ವೀರೇಶ, ವಾಸುದೇವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.