ರಾಯಚೂರು: ಜಾನುವಾರುಗಳಿಗೆ ಮೇವಿನ ಸಮಸ್ಯೆ ನಿವಾರಿಸಲು ಜೈವಿಕ ಮೇವು ಬೆಳೆಸಲು ರಾಜ್ಯದ ರೈತರಿಗೆ ತಿಳಿವಳಿಕೆ ನೀಡಲಾಗುವುದು. ಮೊದಲ ಹಂತ ಪ್ರಾಯೋಗಿಕವಾಗಿ ರಾಯಚೂರು ಜಿಲ್ಲೆಯಲ್ಲಿ ಮೇವು ಬೆಳೆಸಲು ಯೋಜಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಸಚಿವರಾದ ಬಳಿಕ ಬುಧವಾರ ಪ್ರಥಮ ಸಲ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರೈತರು ತಮ್ಮ ಮನೆಗಳ ಎದುರು ಹಾಗೂ ಮನೆಗಳ ಮೇಲೆ ಪ್ಲಾಸ್ಟಿಕ್ ಬುಟ್ಟಿ (ಟ್ರೇ)ಗಳನ್ನಿಟ್ಟು ಕೇವಲ 15 ದಿನಗಳಲ್ಲಿ ಜೈವಿಕ ಮೇವು ಬೆಳೆಸಿ ಜಾನುವಾರುಗಳಿಗೆ ನೀಡಬಹುದು. ರಾಜ್ಯದಲ್ಲಿ ಮೇವು ನೀತಿ ಜಾರಿಯ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಕೆಲಸ ಹಿಂದಿನ ಸರ್ಕಾರದ ಅವಧಿಯಿಂದಲೂ ನಡೆಯುತ್ತಿದೆ ಎಂದು ತಿಳಿಸಿದರು.
ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಕೆರೆ ನಿರ್ಮಾಣ, ಮೀನು ಮರಿ ಖರೀದಿ, ಮೀನು ಆಹಾರ ಖರೀದಿಗೆ ಸಹಾಯಧನ ಒದಗಿಸಲಾಗುವುದು. ಇದಕ್ಕಾಗಿ ಹೊಸ ಬಜೆಟ್ನಲ್ಲಿ ₨ 15 ಕೋಟಿ ಅನುದಾನ ಕೋರಲಾಗಿದೆ. ರಾಯಚೂರು ಜಿಲ್ಲೆಯ ಉಸ್ತುವಾರಿ ವಹಿಸಿದರೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.