ADVERTISEMENT

ಸಿಎಎ, ಎನ್ಆರ್‌ಸಿ ವಿರೋಧಿಸಿ ಎಐಯುಟಿಯುಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 14:55 IST
Last Updated 4 ಮಾರ್ಚ್ 2020, 14:55 IST
ರಾಯಚೂರಿನಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ (ಎಐಟಿಯುಸಿ) ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ರಾಯಚೂರಿನಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ (ಎಐಟಿಯುಸಿ) ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ರಾಯಚೂರು: ಕೇಂದ್ರ ಸರ್ಕಾರ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಕೈಬಿಡಲು. ಕಾರ್ಮಿಕ ತಿದ್ದುಪಡಿ ಕಾಯ್ದೆ ಕಾರ್ಮಿಕ ಸಂಹಿತೆ ಹಾಗೂ ಸಿಎಎ, ಎನ್ಆರ್‌ಸಿ ,ಎನ್‌ಪಿಆರ್‌ ಜಾರಿ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ (ಎಐಟಿಯುಸಿ) ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಬೆಲೆ ಏರಿಕೆ, ನಿರುದ್ಯೋಗ, ಗುತ್ತಿಗೆ ಕಾರ್ಮಿಕ ಪದ್ದತಿಯಿಂದ ಕಡಿಮೆ ವೇತನ ನೀಡಲಾಗುತ್ತಿದೆ. ದುಬಾರಿ ಶಿಕ್ಷಣ,ಆರೋಗ್ಯ, ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಮಧ್ಯೆ ಸಬ್ಸಿಡಿ ಕಡಿತಗೊಳಿಸಿ ಇತರೆ ಜ್ವಲಂತ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಪರಿಹಾರ ನಿಡದೇ, ಬಿಎಸ್ಎನ್ಎಲ್, ಬಿಇಎಮ್ಎಲ್,ಬಿಎಚ್ಇಎಲ್ ನಂತಹ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿ ಕಾರ್ಪೋರೇಟ್ ಮಾಲಿಕರಿಗೆ ಲಾಭ ಮಾಡಿಕೊಡುತ್ತಿದೆ ಎಂದು ದೂರಿದರು.

ಒಂದೆಡೆ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡಿ ಮತ್ತೊಂದೆಡೆ ದುಡಿಯುವ ಕಾರ್ಮಿಕರಲ್ಲಿನ ಐಕ್ಯತೆಯನ್ನು ಮುರಿಯಲು ಸಿಎಎ, ಎನ್ಆರ್‌ಸಿ, ಎನ್ಪಿಆರ್ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ಇದು ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೇ ಕೋಟ್ಯಂತರ ಬಡವರು, ಭೂರಹಿತರು, ಅಸಂಘಟಿತ ಕಾರ್ಮಿಕರು ದಾಖಲೆ ನೀಡಲಾಗದೇ ಬಂಧಿಖಾನೆಗೆ ತಳ್ಳುವ ಕಾಯ್ದೆಗಳಾಗಿವೆ. ಜಾತಿ, ಧರ್ಮವನ್ನು ಮರೆತು ಕಾಯ್ದೆ ವಿರೋಧಿಸಿ ಹೋರಾಟ ಮಾಡುತ್ತಿದನ್ನು ಸಹಿಸದೇ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ.ದೇಶದಲ್ಲಿ ತಲೆ ದೂರಿರುವ ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ, ಬೆಲೆ ಏರಿಕೆ,ನಿರುದ್ಯೋಗ, ಬಡತನ, ಅಪೌಷ್ಟಿಕತೆ ಹಾಗೂ ಇತರೆ ಜ್ವಲಂತ ಸಮಸ್ಯೆಗಳತ್ತ ಲಕ್ಷ್ಯ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಕೂಡಲೇ ಕಾರ್ಮಿಕ, ಜನವಿರೋಧಿ ಸಂವಿಧಾನ ವಿರೋಧಿ ಕಾಯ್ದೆಗಳಾದ ಸಿಎಎ,ಎನ್ಆರ್‌ಸಿ, ಎನ್ಪಿಆರ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಡಳಿತದ ಮುಖೇನ ರಾಷ್ಟ್ರಪತಿ ಅವರಿಗೆ ರವಾನಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಎನ್.ಎಸ್., ಮಹೇಶ್ ಚೀಕಲಪರ್ವಿ, ತಿರುಮಲ ರಾವ್, ಶಿವರಾಜ, ಈರಮ್ಮ, ಪ್ರಭಾವತಿ, ಸಾಜಿದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.