
ಸಿಂಧನೂರು: ಹೋಳಿ ಹಬ್ಬವನ್ನು ಎಲ್ಲ ಜಾತಿ, ಧರ್ಮದವರು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ ಬಿ.ಎಸ್.ತಳವಾರ ಸೂಚನೆ ನೀಡಿದರು.
ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ನಡೆದ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಾ.25ರಂದು ಕಾಮದಹನ ನಡೆಯುತ್ತದೆ. ಮಾ.26ರಂದು ಬಣ್ಣ ಆಡುವ ಹಬ್ಬ ಇದೆ. ಯುವಕರು ಕಾಮದಹನದಂದು ಕಟ್ಟಿಗೆಗಳನ್ನು ಸಂಗ್ರಹಿಸುವ ಭರದಲ್ಲಿ ಜನರಿಗೆ ತೊಂದರೆ ಕೊಡಬಾರದು. ಹೊಸ ಕಟ್ಟಡ ಕಟ್ಟಲು ಹಾಕಿರುವ ಕಟ್ಟಿಗೆಗಳು, ಮರದ ತುಂಡು, ಬಾಗಿಲು, ಕಿಟಕಿಗಳನ್ನು ಮುರಿಯುವ, ಕಳುವು ಮಾಡಿಕೊಂಡು ಹೋಗುವ ಕೆಲಸ ಮಾಡಬಾರದು. ಇದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹವಾಗುತ್ತದೆ. ಇಂತಹ ಘಟನೆಗಳು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಇನ್ಸ್ಪೆಕ್ಟರ್ ಸುಧೀರ್ ಎಂ.ಬೆಂಕಿ ಮಾತನಾಡಿ, ‘ಯುವಕ-ಯುವತಿಯರು ಮೊಟ್ಟೆ, ವಾರ್ನಿಷ, ಗ್ರೀಸ್ ಬಳಸಿ ಬಣ್ಣ ಹಚ್ಚಬಾರದು. ಗುಲಾಲು ಪುಡಿಯನ್ನು ಬಳಸಿದ ಬಣ್ಣವನ್ನೇ ಹಚ್ಚಬೇಕು. ಒತ್ತಾಯದಿಂದ ಯಾರಿಗೂ ಬಣ್ಣ ಹಚ್ಚಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.
ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಶ್ರೀನಿವಾಸಲು, ಮುಖಂಡರಾದ ವೀರೇಶ ಯಡಿಯೂರಮಠ, ರವಿ ಹಿರೇಮಠ ಮಾತನಾಡಿದರು.
ಮುಖಂಡರಾದ ಅಮರೇಗೌಡ ಕಾನಿಹಾಳ, ಫಕೀರಪ್ಪ ಬೂದಿಹಾಳ, ಬಸವರಾಜಗೌಡ ಅಮರಾಪುರ, ಭೀಮಣ್ಣ ಅಮರಾಪುರ, ಆದೆಪ್ಪ ಬಳಿಗಾರ, ಸುರೇಶ ಗೊಬ್ಬರಕಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.