ಪ್ರಜಾವಾಣಿ ವಾರ್ತೆ
ಲಿಂಗಸುಗೂರು: ಗುರುಗುಂಟಾ ಅಮರೇಶ್ವರ ಸುಕ್ಷೇತ್ರದ ಪೌರಾಣಿಕ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಬ್ರಹ್ಮ ರಾಕ್ಷಸಿಗೆ ಕರ್ಣ ಪ್ರಸಾದ ನೀಡುವ ಪದ್ಧತಿಯನ್ನು ಶ್ರಾವಣ ಮಾಸದ ಮೂರನೇ ಸೋಮವಾರ ಆಚರಿಸಲಾಯಿತು.
ಆಚರಿಸಿಕೊಂಡು ಬಂದಿರುವ ಪದ್ಧತಿಯಂತೆ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ಅಮರೇಶ್ವರ ದೇವರ ಉತ್ಸವಮೂರ್ತಿ, ಕಳಸವನ್ನು ಭಾಜಾ– ಭಜಂತ್ರಿ ಸಮೇತ ಕೃಷ್ಣಾ ನದಿಗೆ ಕರೆದೊಯ್ಯುವುದು ವಾಡಿಕೆ. ಗುಂತಗೋಳ ಬಳಿ ಕೃಷ್ಣಾ ನದಿಯ ಬ್ರಹ್ಮ ರಾಕ್ಷಸಿ ಹೊಂಡದ ಬಳಿ ಅಮರೇಶ್ವರ ಉತ್ಸವ ಮೂರ್ತಿ, ಕಳಸ ಹಾಗೂ ಬಂದಿರುವ ಭಕ್ತರಿಗೆ ಅಭಿನವ ಗಜದಂಡ ಶಿವಾಚಾರ್ಯರು ತಲೆ
ಮೇಲೆ ಪಾದವಿಟ್ಟು ಪುಣ್ಯ ಸ್ನಾನ ಮಾಡಿಸುವ ಮೂಲಕ ಚಾಲನೆ ನೀಡಲಾಗುತ್ತದೆ.
ಭಕ್ತರ ಪುಣ್ಯಸ್ನಾನದ ನಂತರ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಮಾಡಿರುವ ಎಡೆಯನ್ನು ಬ್ರಹ್ಮಕುಂಡಕ್ಕೆ ಅರ್ಪಿಸುವ ಮೂಲಕ ಮರಳಿ ದೇವಸ್ಥಾನಕ್ಕೆ ಆಗಮಿಸಿ ಕಳಸಾರೋಹಣ ನೆರವೇರಿಸುತ್ತಿದ್ದಂತೆ ಭಕ್ತರು ಕಾಯಿ ಕರ್ಪುರ ಅರ್ಪಿಸಿ ಪ್ರಸಾದ ಸೇವನೆ ಮಾಡಿದರು.
ಅಮರೇಶ ದೇವರ ಅರ್ಚಕರಾದ ಗಂಗಾಧರಯ್ಯ ಶಾಸ್ತ್ರಿ, ಅಮರೇಶ ತಿಳಿ, ಬಸಯ್ಯಸ್ವಾಮಿ ಗುಂತಗೋಳ, ಪರ್ವತಯ್ಯಸ್ವಾಮಿ ಸೇರಿದತೆ ವಿವಿಧ ಗ್ರಾಮಗಳಿಂದ ಭಕ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.