ಮಸ್ಕಿ: ಮಸ್ಕಿ ಜಾಲಾಶಯದಿಂದ ಭಾನುವಾರ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಸ್ಕಿ ಹಳ್ಳದ ಪ್ರವಾಹಕ್ಕೆ ಕೊಚ್ಚಿಹೋದ ಚನ್ನಬಸವ ಮೂರು ದಿನವಾದರೂ ಪತ್ತೆಯಾಗದ ಕಾರಣ ಕುಟುಂಬದ ಸದಸ್ಯರಲ್ಲಿ ಆಕ್ರಂದನ ಮಡುಗಟ್ಟಿದೆ.
ಸತತ ಮೂರು ದಿನಗಳಿಂದ ತಾಲ್ಲೂಕು ಆಡಳಿತ ಶೋಧ ಕಾರ್ಯ ನಡೆಸಿದೆ. ಮಂಗಳವಾರ ಹಳ್ಳದಲ್ಲಿ ಮತ್ತೆ ಪ್ರವಾಹ ಬಂದ ಕಾರಣ ಶೋಧ ಕಾರ್ಯಕ್ಕೆ ಸ್ವಲ್ಪ ಅಡ್ಡಿಯಾಗಿತ್ತು. ನಂತರ ಪುನಃ ಶೋಧ ಕಾರ್ಯ ಆರಂಭಿಸಲಾಯಿತು. ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರ ಜೊತೆಗೆ ಮೂರು ತೆಪ್ಪಗಳು, ನುರಿತ ಮೀನುಗಾರರ ಜೊತೆಗೆ ಸ್ಥಳೀಯ ಯುವಕರು ಶೋಧ ಕಾರ್ಯ ನಡೆಸಿದ್ದಾರೆ.
ಹಳ್ಳದಲ್ಲಿ ಕಸದ ರಾಶಿ, ಗಿಡಗಳು ತುಂಬಿದ್ದರಿಂದ ಹುಡುಕುವುದು ಕಷ್ಟದ ಕೆಲಸವಾಗಿದೆ. ನೀರಿನಲ್ಲಿ ಕೊಚ್ಚಿಹೋದ ಚನ್ನಬಸವ 24 ಗಂಟೆಯಲ್ಲಿ ಪತ್ತೆಯಾಗಬೇಕು. ಮೂರು ದಿನವಾದರೂ ಪತ್ತೆಯಾಗದೆ ಇರುವುದು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಸರ್ಕಲ್ ಇನ್ಸ್ಪೆಕ್ಟರ್ ದೀಪಕ್ ಬಿ. ಬೂಸರೆಡ್ಡಿ, ಸಬ್ ಇನ್ಸ್ಪೆಕ್ಟರ್ ಸಣ್ಣ ವೀರೇಶ ನೇತೃತ್ವದಲ್ಲಿ ಪ್ರವಾಹದಲ್ಲಿ ಕಣ್ಮರೆಯಾದ ಚನ್ನಬಸವನ ಶೋಧ ಕಾರ್ಯ ಮುಂದುವರೆದಿದೆ.
ಭಾನುವಾರ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ಚನ್ನಬಸವನನ್ನು ಹಗ್ಗದ ಸಹಾಯದಿಂದ ಕರೆದುಕೊಂಡು ವಾಪಾಸು ಬರುತ್ತಿದ್ದ ವೇಳೆ ಮೂವರು ಹಗ್ಗ ತುಂಡಾಗಿ ಚನ್ನಬಸವ ಸೇರಿ ಮೂವರು ರಕ್ಷಣಾ ಸಿಬ್ಬಂದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು. ಮೂವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು. ಚನ್ನಬಸವ ಮಾತ್ರ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು.
ಪ್ರವಾಹದಲ್ಲಿ ಕೊಚ್ಚಿಹೋದ ನನ್ನ ಸಹೋದರ ಚನ್ನಬಸವನನ್ನು ಬೇಗ ಹುಡುಕಿಕೋಡಿ ಎಂದು ಆತನ ಸಹೋದರ ನಾಗರಾಜ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.