ರಾಯಚೂರು: ‘ಕೌನ್ ಬನೇಗಾ ಕರೋಡಪತಿ’ ರಿಯಾಲಿಟಿ ಷೋ ಲಕ್ಕಿ ಡ್ರಾಗೆ ಆಯ್ಕೆ ಆಗಿರುವುದಾಗಿ ದೂರವಾಣಿ ಕರೆ ಮೂಲಕ ನಗರದ ಯುವತಿಯನ್ನು ನಂಬಿಸಿ ₹2,69,050 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವಂಚಕರನ್ನು ಪತ್ತೆ ಮಾಡುವಂತೆ ವಂಚನೆಗೊಳಗಾದ ಯುವತಿ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮನೆಗೆಲಸ ಮಾಡಿಕೊಂಡಿದ್ದ ಆಶ್ರಯ ಕಾಲೋನಿ ನಿವಾಸಿ ನಸೀಮಾ ಮೆಹಬೂಬ್ ವಂಚನೆಗೊಳಗಾದ ಯುವತಿ. ಕೆಬಿಸಿ ಲಕ್ಕಿ ಡ್ರಾ ₹25 ಲಕ್ಷ ಬಹುಮಾನಕ್ಕೆ ಆಯ್ಕೆ ಆಗಿರುವ ಬಗ್ಗೆ ಮೊಬೈಲ್ ಮೊದಲು ಸಂದೇಶ ಬಂದಿತ್ತು. ಆನಂತರ ಕರೆಮಾಡಿದ ವಂಚಕ, ವಿಜಯಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಹುಮಾನ ಪಡೆಯಲು ₹8,050 ಜಮಾಗೊಳಿಸುವಂತೆ ಆರಂಭದಲ್ಲಿ ತಿಳಿಸಿದ್ದ.
ಯುವತಿಯು ವಂಚಕನ ಮಾತು ನಂಬಿ ಸೆಪ್ಟೆಂಬರ್ 23 ರಿಂದ 29 ರವರೆಗೆ ಹೇಳಿದಷ್ಟು ಹಣ ಜಮೆ ಮಾಡುತ್ತಾ ಬಂದಿದ್ದಾರೆ. ಆನಂತರ ವಂಚನೆಗೊಳಗಾಗಿದ್ದು ಅರಿವಿಗೆ ಬಂದು ದೂರು ಸಲ್ಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.