ADVERTISEMENT

ಉತ್ತಮ ಸಂಸ್ಕಾರದಿಂದ ಉತ್ತಮ ಪ್ರಜೆ: ಲಲಿತಾ

ವಿವಿಧೆಡೆ ಸಂಭ್ರಮದೊಂದಿಗೆ ಮಕ್ಕಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 15:38 IST
Last Updated 14 ನವೆಂಬರ್ 2020, 15:38 IST
ರಾಯಚೂರಿನ ಬಸವಶ್ರೀ ಶಾಲೆಯಲ್ಲಿ ಶಿಕ್ಷಕಿಯರು ಮಕ್ಕಳ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ವಿಶೇಷವಾಗಿ ಆಚರಿಸಿದರು
ರಾಯಚೂರಿನ ಬಸವಶ್ರೀ ಶಾಲೆಯಲ್ಲಿ ಶಿಕ್ಷಕಿಯರು ಮಕ್ಕಳ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ವಿಶೇಷವಾಗಿ ಆಚರಿಸಿದರು   

ರಾಯಚೂರು: ತಂದೆ–ತಾಯಿಯರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಷ್ಟ ಪಡುತ್ತಾರೆ ಎಂಬುದರ ಅರಿವು ಈಗ ಮಕ್ಕಳಿಗೆ ಗೊತ್ತಾಗಿದೆ. ಮಕ್ಕಳೆಲ್ಲ ಉತ್ತಮ ಸಂಸ್ಕಾರವನ್ನು ಪಡೆದು ಉತ್ತಮ ಪ್ರಜೆಗಳಾಗಿ ತಂದೆ-ತಾಯಿಯರ ಕನಸು ನನಸು ಮಾಡಬೇಕು ಎಂದು ಬಸವಶ್ರೀ ಶಾಲಾ ಸಂಸ್ಥಾಪಕಿ ಲಲಿತಾ ಎಂ. ಹೇಳಿದರು.

ನಗರದ ಬಸಶ್ರೀ ಶಾಲೆಯಲ್ಲಿ ಶಿಕ್ಷಕಿಯರ ವೃಂದವು ಶಾಲೆಯಲ್ಲಿ ಶನಿವಾರ ಆನ್‌ಲೈನ್‌ನಲ್ಲಿ ಏರ್ಪಡಿಸಿದ್ದ ವರ್ಚ್ಯುವಲ್‌ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್‌ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಮಕ್ಕಳಿಗೆ ಈಗ ಸಂಬಂಧಗಳ ಬಗ್ಗೆ ಹೆಚ್ಚು ಅರಿವಾಗಿದೆ. ಶಿಕ್ಷಕರು ಆನ್‌ಲೈನ್‌ ಮೂಲಕ ಪಾಠ ಹೇಳುತ್ತಿದ್ದರೂ ಭಾವನಾತ್ಮಕ ಸಂಬಂಧ ಬೆಳೆದಿದೆ. ಹೊಸ ತಂತ್ರಜ್ಞಾನದ ಬಳಕೆಯನ್ನು ಎಲ್ಲರೂ ತಿಳಿದುಕೊಂಡಂತಾಗಿದೆ. ಆದರೂ ದಿನನಿತ್ಯ ಪತ್ರಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ADVERTISEMENT

ಉತ್ತಮವಾದ ಪುಸ್ತಕಗಳನ್ನು ಓದುವುದರ ಜೊತೆಗೆ ವ್ಯಾಯಾಮ ಯೋಗ ಪ್ರಾಣಾಯಮಗಳನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಶಾಲೆಯಿಂದ ಕೊಡುವ ವಿವಿಧ ಚಟುವಟಿಕೆಗಳಾದ ಚಿತ್ರಕಲೆ, ಕರಕೌಶಲ್ಯ, ಪ್ರಬಂಧ ಭಾಷಣ, ಹಾಡು, ನೃತ್ಯ ಇವುಗಳಲ್ಲಿ ಭಾಗವಹಿಸಿ. ಇದರಿಂದ ಸೃಜನಾತ್ಮಕ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು.

ವಿದ್ಯಾರ್ಥಿನಿ ನವ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಸೌಮ್ಯ ವಂದಿಸಿದರು.

‘ನೆಹರು ಕೊಡುಗೆ ಅಪಾರ’
ರಾಯಚೂರು:
ದೇಶದಲ್ಲಿ ಹೊಸಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ, ದೀರ್ಘಾವಧಿ ನೀರಾವರಿ ಯೋಜನೆಗಳನ್ನು ರೂಪಿಸಿರುವ ಮಾಜಿ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪಂಡಿತ್‌ ಜವಾಹರಲಾಲ್‌ ನೆಹರು ಜಯಂತಿ ಕಾರ್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ಗೌರವ ಸಲ್ಲಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನೆಹರು ಅವರು, ಎಲ್ಲರ ಒಮ್ಮತದೊಂದಿಗೆ ಮೊದಲ ಪ್ರಧಾನಿಯಾಗಿ ಆಯ್ಕೆಯಾದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಬಡತನ ನಿವಾರಣೆಗೆ ಭದ್ರ ಬೂನಾದಿ ಹಾಕಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ವಸಂತಕುಮಾರ್‌ ಮಾತನಾಡಿ, ನೆಹರು ಅವರು ಮಕ್ಕಳ ಬಗ್ಗೆ ಅಪಾರ ಪ್ರೀತಿ ತೋರಿಸುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ ನೂತನ ಅಧ್ಯಕ್ಷ ಈ.ವಿನಯಕುಮಾರ್‌ ಮಾತನಾಡಿದರು. ಮುಖಂಡರಾದ ಅಮರೇಗೌಡ ಹಂಚಿನಾಳ, ಶಶಿಕಲಾ ಭೀಮರಾಯ, ಜಯವಂತರಾವ್‌ ಪತಂಗೆ, ಜಿಂದಪ್ಪ ಮತ್ತಿತರರು ಇದ್ದರು.

ಅಂಗನವಾಡಿ ಕೇಂದ್ರ: ನಗರದ ಹರಿಜನವಾಡ ಅಂಗನವಾಡಿ ಕೇಂದ್ರ–1 ರಲ್ಲಿ ಮಕ್ಕಳ ದಿನ ಆಚರಿಸಲಾಯಿತು.

ಪಂಡಿತ್‌ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ವ್ಯಾಪ್ತಿಯ ಮಕ್ಕಳು, ಗರ್ಭಿಣಿಯರು, ಭಾಣಂತಿಯರು, ಕೀಶೋರಿಯರು ಮತ್ತು ಭಾಗ್ಯಲಕ್ಷ್ಮೀ ಬಾಂಡ್‌ ಫಲಾನುಭವಿಗಳು ಭಾಗವಹಿಸಿದ್ದರು. ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಚ್‌.ಪದ್ಮಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.