ರಾಯಚೂರು: ನಗರದ ಖಾಸಭಾವಿ ಮತ್ತು ಈರಣ್ಣ ದೇವಸ್ಥಾನದ ಮಧ್ಯೆಭಾಗದಲ್ಲಿ ಏಕೈಕ ದೋಭಿಘಾಟ್ಮೀಸಲು ಜಾಗವಿದ್ದು, ಅನೇಕ ವರ್ಷಗಳಿಂದ ಸೌಲಭ್ಯ ವಂಚಿತವಾಗಿ ಉಳಿದುಕೊಂಡಿದೆ.
ಮಡಿವಾಳ ಸಮಾಜದ ಅನೇಕ ಕುಟುಂಬಗಳು ನಗರದಲ್ಲಿ ಕುಲಕಸುಬು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿದಿನ ಎದುರಾಗುವ ಹಲವು ಸವಾಲುಗಳ ಮಧ್ಯೆಯೂ ಬಟ್ಟೆಗಳನ್ನು ಸ್ವಚ್ಛಗೊಳಿಸಿ ಇಸ್ತ್ರೀ ಮಾಡಿಕೊಡುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಾಯಕ ನಂಬಿಕೊಂಡ ಈ ಸಮುದಾಯಕ್ಕೆ ಆಧಾರಸ್ಥಂಬವಾದ ದೋಭಿಘಾಠನಲ್ಲಿ ಶುಚಿತ್ವ, ಸುರಕ್ಷತೆ ಹಾಗೂ ನೀರು ಪೂರೈಕೆಯಂತಹ ಸೌಲಭ್ಯಗಳನ್ನು ಮಾಡಿಕೊಡಬೇಕಾಗಿದ್ದ ನಗರಸಭೆಯು ಅಸಹಕಾರ ತೋರಿಸುತ್ತಿದೆ ಎನ್ನುವ ಅಸಮಾಧಾನ ಸಮಾಜದ ಜನರಲ್ಲಿದೆ.
ಕುಲಕುಸುಬು ಮುಂದುವರಿಸುವುದನ್ನು ಪ್ರೋತ್ಸಾಹಿಸಲು ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ ಯೋಜನೆಗಳು ವಾಸ್ತವದಿಂದ ಎಷ್ಟು ದೂರ ಉಳಿದಿವೆ ಎಂಬುದು ದೋಭಿಘಾಟ್ನೋಡಿದರೆ ಮನವರಿಕೆ ಆಗುತ್ತದೆ. ಮೂರು ದಶಕಗಳ ಹಿಂದೆ ನಗರಸಭೆಯಿಂದ ಮಡಿವಾಳ ಸಮಾಜಕ್ಕೆ ಜಾಗ ಕೊಡಲಾಗಿದೆ. ಆದರೆ, ಅದಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡಿಲ್ಲ. ಮೀಸಲಾಗಿರುವ ಈ ಜಾಗಕ್ಕೆ ಆವರಣ ಗೋಡೆ, ನೀರು ಪೂರೈಕೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಮಾಡಿಕೊಡಬೇಕಿತ್ತು.
ಜಿಲ್ಲಾ ಮಡಿವಾಳರ ಲ್ಯಾಂಡ್ರಿ–ದೋಭಿಘಾಟ್ಕ್ಷೇಮಾಭಿವೃದ್ಧಿ ಸಂಘದಿಂದ ನಗರಸಭೆ ಪೌರಾಯುಕ್ತರು ಮತ್ತು ಅಧ್ಯಕ್ಷರಿಗೆ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಸ್ಪಂದನೆ ಮಾತ್ರ ಸಿಕ್ಕಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒದಗಿಸಿದ್ದ ಅನುದಾನದಡಿ ದೋಭಿಘಾಠನ ಒಂದು ಭಾಗದಲ್ಲಿ ಮಾತ್ರ ಅಭಿವೃದ್ಧಿಯಾಗಿದೆ.
1992 ರಲ್ಲಿ ಎ.ಪಾಪಾರೆಡ್ಡಿ ಅವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೋಭಿಘಾಟ್ಉದ್ಘಾಟನೆ ನೆರವೇರಿಸಿದ್ದರು. ಅಂದು ಎಂ.ಎಸ್. ಪಾಟೀಲ ಅವರು ಶಾಸಕರಿದ್ದರು. ದೋಭಿಘಾಟ್ನಿರ್ಮಿಸುವ ಪೂರ್ವದಲ್ಲಿ ಮಡಿವಾಳ ಸಮಾಜದ ಶ್ರಮಿಕರು ಮಾವಿನಕೆರೆಯಲ್ಲಿಯೆ ಬಟ್ಟೆಗಳನ್ನು ತೊಳೆಯುತ್ತಿದ್ದರು. ಈ ಹಿಂದೆ ಕೆರೆ ಸುತ್ತಲೂ ಇಷ್ಟೊಂದು ಗಲೀಜು ಇರುತ್ತಿರಲಿಲ್ಲ. ಬಟ್ಟೆ ತೊಳೆದ ನಂತರ, ಕೆರೆ ನೀರನ್ನೆ ಕುಡಿಯುತ್ತಿದ್ದೇವು. ಅಷ್ಟು ಶುಚಿತ್ವ ವಾತಾವರಣ ಅಲ್ಲಿತ್ತು. ಈಗ ಸಂಪೂರ್ಣ ಬದಲಾಗಿದ್ದು, ಶುಚಿತ್ವ ಎಂಬುದು ಮಾಯವಾಗಿದೆ. ದೋಭಿಘಾಟ್ಗೆ ಮೀಸಲಿಟ್ಟಿದ್ದ ಜಾಗವನ್ನು ಕಸಿದುಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ ಎನ್ನುವ ಅಸಮಾಧಾನವನ್ನು ಸಮಾಜದ ಜನರು ಹೊರಹಾಕುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.