ADVERTISEMENT

ದೇವದುರ್ಗ: ಜೆಡಿಎಸ್ ಪ್ರಚಾರ ವಾಹನದ‌ ಮೇಲೆ ದಾಳಿ, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 18:03 IST
Last Updated 5 ಮಾರ್ಚ್ 2023, 18:03 IST
ಜೆಡಿಎಸ್ ಪಂಚರತ್ನ ಯೋಜನೆಗಳ ಪ್ರಚಾರ ವಾಹನದ ಮೇಲೆ ದೇವತಗಲ್ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ದಾಳಿ ಮಾಡಿದ್ದಾರೆ.
ಜೆಡಿಎಸ್ ಪಂಚರತ್ನ ಯೋಜನೆಗಳ ಪ್ರಚಾರ ವಾಹನದ ಮೇಲೆ ದೇವತಗಲ್ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ದಾಳಿ ಮಾಡಿದ್ದಾರೆ.   

ದೇವದುರ್ಗ (ರಾಯಚೂರು ಜಿಲ್ಲೆ): ಜೆಡಿಎಸ್ ಪಂಚರತ್ನ ಯೋಜನೆಗಳ ಪ್ರಚಾರ ವಾಹನದ ಮೇಲೆ ತಾಲ್ಲೂಕಿನ ದೇವತಗಲ್ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ದಾಳಿ ಮಾಡಿದ್ದು, ಘಟನೆಯಲ್ಲಿ ಜೆಡಿಎಸ್ ಪಕ್ಷದ ಮೂವರು ಪ್ರಚಾರಕರು ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಅರಕಲಗೋಡನಿಂದ ಬಂದಿದ್ದ‌ ವಾಹನ ಚಾಲಕ ಶ್ರೀನಿವಾಸ, ದೇವದುರ್ಗ ತಾಲ್ಲೂಕಿನ ಹನುಮಗೌಡ ಹಾಗೂ ರಮೇಶ ಅವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ವಾಹನದ ಮೇಲೆ ಕಲ್ಲುತೂರಾಟ ಮಾಡಲಾಗಿದ್ದು, ಚಾಲಕನ ತಲೆಗೆ ಭಾರಿ ಏಟು ಬಿದ್ದಿರುವುದರಿಂದ ದೇವದುರ್ಗ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಅವರು ಜಾಲಹಳ್ಳಿ ಪೊಲೀಸ್ ಠಾಣೆ ಎದುರು ತಡರಾತ್ರಿಯಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನಿಬ್ಬರು ಗಾಯಾಳುಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ‌ ವಿರುದ್ಧ ಕೂಡಲೇ ದೂರು ದಾಖಲಿಸಿಕೊಂಡು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.