ADVERTISEMENT

ಕಾಂಗ್ರೆಸಿಗರೆ ರಾಮನ ನಿಜವಾದ ಭಕ್ತರು: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:03 IST
Last Updated 7 ಏಪ್ರಿಲ್ 2021, 16:03 IST
ವಿ.ಎಸ್‌. ಉಗ್ರಪ್ಪ
ವಿ.ಎಸ್‌. ಉಗ್ರಪ್ಪ   

ರಾಯಚೂರು: ‘ಕಾಂಗ್ರೆಸಿನವರೆ ನಿಜವಾದ ರಾಮಭಕ್ತರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಮಲಲ್ಲಾ‌ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ರಾಮಾಯಣದಲ್ಲಿ ಬರೆದಿರುವ ಜನ ಕಲ್ಯಾಣ ನೀತಿಗಳನ್ನು ಕಾಂಗ್ರೆಸ್‌ ಅನುಷ್ಠಾನಗೊಳಿಸುತ್ತಾ ಬಂದಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತವು ಎಲ್ಲ ರೀತಿಯಿಂದಲೂ ವಿಫಲವಾಗಿವೆ. ಇವರಿಬ್ಬರು ರಾಮಾಯಣ ಓದಿಲ್ಲ. ನಾನು ಪ್ರತಿನಿತ್ಯ 10 ನಿಮಿಷ ಓದುತ್ತೇನೆ. ಅದರಲ್ಲಿ ಕೃಷಿಕರಿಗೆ, ಹೈನುಗಾರಿಕೆ ಸೇರಿದಂತೆ ಆಡಳಿತ ಹೇಗೆ ಮಾಡಬೇಕು ಮತ್ತು ಅದರ ಮಹತ್ವವನ್ನು ಬರೆಯಲಾಗಿದೆ’ ಎಂದರು.

‘ಬಿಜೆಪಿಯವರು ಹೇಳುವುದೊಂದು, ಮಾಡುತ್ತಿರುವುದು ಇನ್ನೊಂದು. ರೈತರು ನಿರಂತರ ಹೋರಾಟ ಮಾಡಿಕೊಂಡು ಸಾಯುತ್ತಿದ್ದರೂ ಅವರತ್ತ ನೋಡುತ್ತಿಲ್ಲ. ರಾಮಾಯಣದ ಆದರ್ಶ ಯಾರೂ ಪಾಲನೆ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಮಸ್ಕಿ ಉಪಚುನಾವಣೆಯು ಬಿಜೆಪಿಯ ಅಧಿಕಾರದಾಹ ಮತ್ತು ಪ್ರತಾಪಗೌಡರ ಪ್ರತಾಪದಿಂದಾಗಿ ಬಂದಿದೆ. ಅವರು ಕಾಂಗ್ರೆಸ್ ಶಾಸಕರಾಗಿ ಇರುತ್ತಾರೆ ಎನ್ನುವ ವಿಶ್ವಾಸ ಜನರಲ್ಲಿತ್ತು. ಮತದಾರರ ವಿಶ್ವಾಸ, ನಂಬಿಕೆಗೆ ದ್ರೋಹ ಮಾಡಿ ರಾಜೀನಾಮೆ ನೀಡಿ ಈ ಚುನಾವಣೆ ಬರುವಂತೆ ಮಾಡಿದ್ದಾರೆ’ ಎಂದರು.

‘ನಂಬಿಕೆದ್ರೋಹ ಮಾಡಿದವರಿಗೆ ಮತ್ತೆ ಮತ ನೀಡಬೇಕೆ? ಅಧಿಕಾರದ ದಾಹ ಇರುವವರಿಗೆ ಮತ ನೀಡಬೇಕೆ? ಎನ್ನುವ ಪ್ರಶ್ನೆಗಳು ಈಗ ಉದ್ಭವಿಸಿವೆ. ಇದು ಜನರ ಸ್ವಾಭಿಮಾನದ ಪ್ರಶ್ನೆಯಾಗಿ ಜನಾಕ್ರೋಶ ಉದ್ಭವವಾಗುತ್ತಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂದರೂ ಪ್ರತಾಪಗೌಡರನ್ನು ಗೆಲ್ಲಿಸಲು ಸಾಧ್ಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎಸ್‌ಸಿ, ಎಸ್‌ಟಿ ವರ್ಗದ ಜನರಿಗೆ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರು 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದ್ದರು.ಇದುವರೆಗೆ ಮೀಸಲಾತಿ ಹೆಚ್ಚಳ‌ ಮಾಡಿಲ್ಲ. ಬಿಜೆಪಿಯವರು ಸಮಯ ಸಾಧಕರಿದ್ದಾರೆ. ಜನರ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.