ಸಿಂಧನೂರು: ಶ್ರಮಜೀವಿಗಳಾದ ಎಲ್ಲ ಕಟ್ಟಡ ಕಾರ್ಮಿಕರು ಸಂಘದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುಕ್ತಾರ್ ಅಹ್ಮದ್ ಹೇಳಿದರು.
ನಗರದ ಎಪಿಎಂಸಿಯಲ್ಲಿರುವ ಶ್ರಮಿಕ ಭವನದಲ್ಲಿ ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ವತಿಯಿಂದ ಶುಕ್ರವಾರ ನಡೆದ ಪದಾಧಿಕಾರಿಗಳ ಸಭೆ, ಕ್ಯಾಲೆಂಡರ್ ಬಿಡುಗಡೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಳುವುದರಿಂದ ನಕಲಿ ಕಾರ್ಮಿಕರನ್ನು ಗುರುತಿಸಲು ಸಾಧ್ಯವಾಗುತ್ತದೆ. ಜೊತೆಗೆ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡಿಯಲು ಅನುಕೂಲವಾಗಲಿದೆ’ ಎಂದರು.
ನಂತರ ಹುಬ್ಬಳ್ಳಿಯ ಸಂಜೀವಿನಿ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ಹಾರ್ಟ್ ಕೇರ್ ಸೆಂಟರ್ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ ‘ಕಟ್ಟಡ ಕಾರ್ಮಿಕರು ದುಡಿಮೆಯ ಜೊತೆಗೆ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಮದ್ಯಸೇವನೆ ಸೇರಿದಂತೆ ದುಶ್ಚಟಗಳಿಂದ ದೂರವಿರಬೇಕು. ಉಚಿತ ಆರೋಗ್ಯ ಶಿಬಿರಗಳಿಂದ ಬಡ ಮತ್ತು ಕಾರ್ಮಿಕರಿಗೆ ಆರೋಗ್ಯ ತಪಾಸಣೆಗೆ ಸಹಕಾರಿಯಾಗಲಿದೆ’ ಎಂದರು.
ಸಂಘದ ಉಪಾಧ್ಯಕ್ಷ ಮೇಸ್ತ್ರಿ, ಕಾರ್ಯದರ್ಶಿ ಸಾಧಿಕ್ ಮೇಸ್ತ್ರಿ, ಸಹ ಕಾರ್ಯದರ್ಶಿ ನಾಗರಾಜ್ ನಾಯಕ ಮೇಸ್ತ್ರಿ, ಖಜಾಂಚಿ ಶಂಕರ್ ಸಿಂಗ್ ಮೇಸ್ತ್ರಿ, ಸದಸ್ಯರಾದ ಖಾದರ್ ಮೇಸ್ತ್ರಿ, ಹಮೀದ್ ಮೇಸ್ತ್ರಿ, ಬಸವರಾಜ್ ಮೇಸ್ತ್ರಿ, ಲಕ್ಷ್ಮಣ ಮೇಸ್ತ್ರಿ, ಖಾದರ್ ಮೇಸ್ತ್ರಿ, ಹಿರಿಯ ಕಟ್ಟಡ ಕಾರ್ಮಿಕರಾದ ಇಸ್ಮೈಲ್ಸಾಬ್ ಗೋಮರ್ಸಿ, ಇಸ್ಮಾಯಿಲ್ ಮೇಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.