
ರಾಯಚೂರು: ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ನಿವೃತ್ತ ಕಾರ್ಯದರ್ಶಿ ವೀರಭದ್ರಪ್ಪ ಚಿಂಚರಕಿ ವಿರುದ್ಧ ವಿಶೇಷ ತನಿಖೆ ನಡೆಸಿ ವಂಚನೆ ಪ್ರಕರಣ ದಾಖಲಿಸಬೇಕು ಎಂದು ರೈತ ಸಹಕಾರ ಸಂಘಗಳ ಸಂರಕ್ಷಣೆ ಹೋರಾಟ ಸಮಿತಿ ಮುಖಂಡ ಮಲ್ಲಯ್ಯ ಕಟ್ಟಿಮನಿ ಒತ್ತಾಯಿಸಿದರು.
ವೀರಭದ್ರಪ್ಪ ಚಿಂಚರಕಿ ಅವರ ಸೇವಾವಧಿ ಪೂರ್ಣಗೊಂಡಿದ್ದರೂ ಒಂದು ವರ್ಷ ಹೆಚ್ಚುವರಿ ಅವಧಿ ಅಧಿಕಾರದಲ್ಲಿ ಮುಂದುವರಿದು ಆಡಳಿತ ಮಂಡಳಿಯ ಗಮನಕ್ಕೆ ತರದೆ ಮಾಸಿಕ ₹40 ಸಾವಿರಗಳಂತೆ ಒಂದು ವರ್ಷಕ್ಕೆ ₹4.80 ಲಕ್ಷ ವೇತನ ರೂಪದಲ್ಲಿ ಪಡೆದುಕೊಂಡಿದ್ದು, ದಾಖಲೆಗಳಿಂದ ಸಾಬೀತಾಗಿದೆ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.
ದೇವದುರ್ಗ ತಾಲ್ಲೂಕಿನ ಸಹಕಾರ ಸಂಘಗಳು ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ಸಲ್ಲಿಸಿದ್ದರೂ ವಿಚಾರಣೆ ನಡೆಸದೆ ತಪ್ಪಿತಸ್ಥರನ್ನು ರಕ್ಷಿಸಲು ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯಕ ನಿಬಂಧಕ ಶೇಖ್ಹುಸೇನ್ ಮತ್ತು ತಾಲ್ಲೂಕು ವಿಸ್ತರಣಾಧಿಕಾರಿ ರಾಜು ಅವರ ವಿರುದ್ಧ ತನಿಖೆ ನಡೆಸಿ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಜಾಲಹಳ್ಳಿ ಸಹಕಾರ ಸಂಘದ ಹಾಲಿ ನಿರ್ದೇಶಕ ಕೆ.ಎಸ್ ನಾಡಗೌಡ, ದೇವದುರ್ಗ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಹ ಸಂಚಾಲಕ ಬಸವರಾಜ ನಾಯಕ, ಅಮರೇಶ ಹಾಗೂ ರಾಚಪ್ಪಚೌದ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.