ADVERTISEMENT

ಕಾಲುವೆಗಳ ಆಧುನೀಕರಣದಲ್ಲಿ ಭ್ರಷ್ಟಾಚಾರ: ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 16:45 IST
Last Updated 14 ಜುಲೈ 2021, 16:45 IST
ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಅಧುನೀಕರಣ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಲಿಂಗಸುಗೂರಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಲಾಯಿತು.
ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಅಧುನೀಕರಣ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಲಿಂಗಸುಗೂರಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಲಾಯಿತು.   

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಅಧುನೀಕರಣ ಹೆಸರಲ್ಲಿ ಅಧಿಕಾರಿಗಳು, ಗುತ್ತಿಗೆದಾರ ಕಂಪೆನಿಗಳು ಶ್ಯಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬುಧವಾರ ಪ್ರತಿಭಟನೆ ನಡೆಸಿದ ರೈತರು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಶಾಲಂಸಾಬ ಮೂಲಕ ಸಲ್ಲಿಸಿದರು.

2020ರಲ್ಲಿ ನಾರಾಯಣಪುರ ಬಲದಂಡೆ ಮುಖ್ಯನಾಲೆ ಅಧುನೀಕರಣಕ್ಕೆ ಕೋಟ್ಯಂತರ ಹಣ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾಲುವೆ ನಿರ್ಮಾಣದಲ್ಲಿ ಶೇ 50ರಷ್ಟು ಗುಣಮಟ್ಟದ ಮಣ್ಣು ಬಳಸದೆ ಸ್ಥಳದಲ್ಲಿದ್ದ ದಶಕದ ಹಿಂದೆ ತೆಗೆದು ಹಾಕಿ ಗರ್ಚು ಬಳಸುತ್ತಿದ್ದಾರೆ ಎಂದು ಗಮನ ಸೆಳೆದರು.

ADVERTISEMENT

ಮುಖ್ಯ ನಾಲೆಗೆ ಅಲ್ಲಲ್ಲಿ ಕಬ್ಬಿಣದ ಸರಳು ಬಳಸುವುದು, ನಿಗದಿತ ಸೈಜ್‍ ಕಂಕರ್‍, ಗುಣಮಟ್ಟದ ಸಿಮೆಂಟ್‍ ಬಳಸದೆ ಮನಸೋ ಇಚ್ಛೆ ಕಾಮಗಾರಿ ನಡೆಸಿದ್ದಾರೆ. ಕೇವಲ 2 ರಿಂದ 3 ಇಂಚು ಲೈನಿಂಗ್‍ ಹಾಕಿದ್ದು ಕಳಪೆತ ಪ್ರದರ್ಶಿಸಿದೆ. ಈ ಕುರಿತು ಅನೇಕ ಕಡೆಗಳಲ್ಲಿ ಸ್ವತಃ ರೈತರಿಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರ ಅನುಕೂಲಕ್ಕೆ ಹೆಚ್ಚುವರಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‍. ಜಿಲ್ಲಾ ಘಟಕ ಅಧ್ಯಕ್ಷ ಸೂರೂರಯ್ಯ ಮಠ. ತಾಲ್ಲೂಕು ಘಟಕ ಅಧ್ಯಕ್ಷ ಹಟ್ಟಿ ವೀರನಗೌಡ. ಮುಖಂಡರಾದ ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ, ಬಸವರಾಜ ಪಾಟೀಲ್‍, ಪ್ರಭಾಕರ ಪಾಟೀಲ, ಹುಚ್ಚರೆಡ್ಡಿ ಅಮೀನಗಡ, ಜಯಕುಮಾರ ಕುರುಕುಂದಾ, ಬೂದಯ್ಯಸ್ವಾಮಿ, ಶಂಕರಪ್ಪ ದೇವತಗಲ್‍, ಮಲ್ಲಣ್ಣ ಗೌಡೂರು, ಸಿದ್ದೇಶ ಗೌಡೂರು, ಬಸನಗೌಡ ಮಟ್ಟೂರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.