ADVERTISEMENT

ರಾಯಚೂರು: ಪ್ರತಿದಿನ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ

‌ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 13:45 IST
Last Updated 6 ಜನವರಿ 2022, 13:45 IST
ಡಾ.ಅವಿನಾಶ ಮೆನನ್‌
ಡಾ.ಅವಿನಾಶ ಮೆನನ್‌   

ರಾಯಚೂರು: ಕೋವಿಡ್‌ ಮೂರನೇ ಅಲೆ ತಡೆಗಾಗಿ ಜಿಲ್ಲೆಯಲ್ಲೂ ಬಿಗಿಕ್ರಮ ಕೈಗೊಂಡಿರುವ ಜಿಲ್ಲಾಡಳಿತವು ಜನವರಿ 19 ರವರೆಗೂ ಪ್ರತಿದಿನ ರಾತ್ರಿ ಹಾಗೂ ಪ್ರತಿ ವಾರಾಂತ್ಯ ಎರಡೂ ದಿನವೂ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಅವಿನಾಶ ಯಾದವ್‌ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಜನವರಿ 7 ರಂದು ರಾತ್ರಿ 10 ಗಂಟೆಯಿಂದ ಜನವರಿ 10 ರಂದು ಬೆಳಿಗ್ಗೆ 6 ಗಂಟೆವರೆಗೂ ಕರ್ಫ್ಯೂ ಜಾರಿ ಇರುತ್ತದೆ. ಅಗತ್ಯ ಹಾಗೂ ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳು ಸಂಚರಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಕೋವಿಡ್‌ ನಿಯಂತ್ರಿಸುವ ಕಾರ್ಯ ಮಾಡುವ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಸೇವೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನಿಯಂತ್ರಿತ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.

ಎಲ್ಲ ಸಾರ್ವಜನಿಕ ಉದ್ಯಾನಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಕೈಗಾರಿಕೆ, ಕಂಪೆನಿ, ಸಂಸ್ಥೆ, ತುರ್ತು ಮತ್ತು ಅಗತ್ಯ ಸೇವೆ ನಿರ್ವಹಿಸುವವರು ಸಂಬಂಧಿತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ರೋಗಿಗಳು ಮತ್ತು ಆರೈಕೆದಾರರಿಗೆ, ಕೋವಿಡ್‌ ಲಸಿಕೆ ಪಡೆಯುವವರು ಕನಿಷ್ಠ ದಾಖಲಾತಿಗಳೊಂದಿಗೆ ಓಡಾಡಬಹುದು ಎಂದು ತಿಳಿಸಲಾಗಿದೆ.

ADVERTISEMENT

ಆಹಾರ, ದಿನಸಿ, ಹಣ್ಣುಗಳು, ತರಕಾರಿಗಳು, ಮಾಂಸ, ಮೀನು, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಪ್ರಾಣಿಗಳು ಮೇವುಗಳಿಗೆ ಸಂಬಂಧಿಸಿದ ಅಂಗಡಿಗಳು, ಬೀದಿಬದಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಹೋಂ ಡೆಲಿವರಿಗೆ ಅವಕಾಶವಿದೆ. ರೆಸ್ಟೊರೆಂಟ್‌ಗಳಿಂದ ಆಹಾರ ಪಾರ್ಸಲ್‌ ತೆಗೆದುಕೊಂಡು ಹೋಗುವುದಕ್ಕೆ ಮತ್ತು ಡೆಲಿವರಿ ಸೇವೆ ಒದಗಿಸುವುದಕ್ಕೆ ಕರ್ಫ್ಯೂ ಅವಧಿಯಲ್ಲಿ ಅವಕಾಶ ಮಾಡಲಾಗಿದೆ.

ರೈಲು, ವಿಮಾನ ಹಾಗೂ ರಸ್ತೆ ಸಂಚಾರ ಮಾಡುವ ಪ್ರಯಾಣಿಕರು ಟಿಕೆಟ್‌ ಅಥವಾ ಯಾವುದೇ ದಾಖಲೆ ಪ್ರದರ್ಶಿಸಿ ಸಂಚರಿಸಬಹುದಾಗಿದೆ. ಬಯಲಿನಲ್ಲಿ ನಡೆಯುವ ವಿವಾಹಕ್ಕೆ 200 ಜನರು ಹಾಗೂ ಕಲ್ಯಾಣ ಮಂಟಪದೊಳಗಿನ ವಿವಾಹಕ್ಕೆ 100 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.