
ಸಿಂಧನೂರು: ‘ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ವಂಚನೆಯಿಂದ ತಪ್ಪಿಸಿಕೊಳ್ಳಲು ಮತ್ತು ತಡೆಯಲ ಯುವಜನರು ಸೇರಿದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಟೌನ್ಹಾಲ್ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಜಿಲ್ಲಾ ಪೊಲೀಸ್ ಹಾಗೂ ಸಿಂಧನೂರು ಉಪವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಂಪ್ಯೂಟರ್, ಸ್ಮಾರ್ಟ್ಫೋನ್ ಹಾಗೂ ಮತ್ತಿತರ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಮಾಡುವ ಕಾನೂನುಬಾಹಿರ ಚಟುವಟಿಕೆಗಳೇ ಸೈಬರ್ ಅಪರಾಧವಾಗಿದೆ. ಇದರಲ್ಲಿ ಫಿಶಿಂಗ್, ಹ್ಯಾಕಿಂಗ್, ಗುರುತಿನ ಕಳವು, ಆನ್ಲೈನ್ ವಂಚನೆಗಳು, ಬೆದರಿಸುವಿಕೆ ಸೇರಿದೆ. ಇವುಗಳಿಂದ ವ್ಯಕ್ತಿಗಳ, ಸಂಸ್ಥೆಗಳ ಮತ್ತು ಸರ್ಕಾರಗಳಿಗೆ ಆರ್ಥಿಕ ನಷ್ಟ, ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಸೈಬರ್ ಕ್ರೈಂ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಪಾಲಕರು ಹಾಗೂ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು’ ಎಂದರು.
‘ಜನವರಿಯಿಂದ ಇಲ್ಲಿಯವರೆಗೆ ರಸ್ತೆ ಅಪಘಾತದಲ್ಲಿ ಜಿಲ್ಲೆಯ 262 ಜನ ಮರಣ ಹೊಂದಿದ್ದಾರೆ. 700 ಕ್ಕಿಂತಲೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಆದ್ದರಿಂದ ವಾಹನಗಳ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ, ವಿಮೆ ಹೊಂದಿರಬೇಕು. ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ದೇಶದ ಮೂರನೇ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಕವಿತಾಳ ಠಾಣೆ ಪಡೆದುಕೊಂಡ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಗುರುಚಂದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು.
ಡಿವೈಎಸ್ಪಿ ಚಂದ್ರಶೇಖರ.ಜಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀರಾರೆಡ್ಡಿ, ಮಾನ್ವಿ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ ಕೆಂಚರೆಡ್ಡಿ, ಪಾಟೀಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ, ಪಿಎಸ್ಐಗಳಾದ ಯರಿಯಪ್ಪ, ಸುಜಾತ ಉಪಸ್ಥಿತರಿದ್ದರು.
ಲೋಕೇಶ್ ಪ್ರಾರ್ಥಿಸಿದರು. ರೇಣುಕಾ ರೆಡ್ಡಿ ನಿರೂಪಿಸಿದರು. ನಂತರ ಸೈಬರ್ ಮತ್ತು ಸಂಚಾರ ಅಪರಾಧಗಳ ಕುರಿತು ವಿಡಿಯೊ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಸೈಬರ್ ವಂಚನೆಗಳಾದ ಫಿಶಿಂಗ್ ಡೀಪ್ ಫೇಕ್ಗಳು ಮತ್ತು ಆನ್ಲೈನ್ ಬೆಟ್ಟಿಂಗ್ಗಳಂಥ ಅಪರಾಧಗಳನ್ನು ತಡೆಯಲು ತಂತ್ರಜ್ಞಾನ ಮತ್ತು ತರಬೇತಿ ಮುಖ್ಯವಾಗಿದ್ದು ಸುರಕ್ಷಿತ ಡಿಜಿಟಲ್ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಜಾಗೃತರಾಗಿ ಸಹಕರಿಸಬೇಕಿದೆಎಂ.ಪುಟ್ಟಮಾದಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.