ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆ ಕ್ರೆಸ್ಟ್ಗೇಟ್ಗಳ ಮೂಲಕ ಕೃಷ್ಣಾ ನದಿಗೆ 2.17ಲಕ್ಷ ಕ್ಯುಸೆಕ್ ನೀರು ಹರಿಸುತ್ತಿರುವ ಪರಿಣಾಮ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.
ಮುಳುಗಡೆಯಾಗಿರುವ ಸೇತುವೆಯ ಕೆಲ ಸ್ಟೋನ್ ಗಾರ್ಡ್ಗಳು ಕೊಚ್ಚಿ ಹೋಗಿ, ಇನ್ನೂ ಕೆಲ ಸ್ಟೋನ್ ಗಾರ್ಡ್ಗಳು ನೇತಾಡುತ್ತಿದ್ದು ಸೇತುವೆ ಶಿಥಿಲವಾಗುವ ಭಯ ಹೆಚ್ಚಾಗಿದೆ.
ಈ ಮೊದಲು ಕೃಷ್ಣಾ ಪ್ರವಾಹದಿಂದ ಮುಳುಗಡೆ ಆಗಿದ್ದ ಸೇತುವೆ ಭಾಗಶಃ ಕೊಚ್ಚಿ ಹೋಗಿತ್ತು. ದುರಸ್ತಿ ಆದ ಕೆಲವೆ ದಿನಗಳಲ್ಲಿ ಪುನಃ ಸೇತುವೆ ಮುಳುಗಡೆಯಾಗಿದೆ. ಈಗಾಗಲೆ ಸ್ಟೋನ್ ಗಾರ್ಡ್ಗಳು ಅಲ್ಲಲ್ಲಿ ಕೊಚ್ಚಿ ಹೋಗಿವೆ. ಕೆಲವೆಡೆ ಮುರಿದಿವೆ. ಕಳಪೆ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸುತ್ತ ಬಂದಿದ್ದರು. ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗುವ ಸಾಧ್ಯತೆ ಇದೆ ಎಂದು ಹಂಚಿನಾಳ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿ.ಪಂ. ಎಂಜಿನಿಯರ್ ಎಂ. ಜಯಪ್ಪ ಅವರನ್ನು ಸಂಪರ್ಕಿಸಿದಾಗ, ‘ಶೀಲಹಳ್ಳಿ ಸೇತುವೆಯ ಕೆಲ ಸ್ಟೋನ್ ಗಾರ್ಡ್ಗಳು ನೀರಿನ ರಭಸಕ್ಕೆ ಕಿತ್ತಿರುವುದು ನಿಜ. ಅದರಿಂದ ಸೇತುವೆಗೆ ಯಾವುದೇ ಹಾನಿಯಾಗದು. ಪ್ರವಾಹ ಕಡಿಮೆ ಆದ ಮೇಲೆ ಸೇತುವೆ ಪರಿಶೀಲಿಸಿ, ದುರಸ್ತಿ ಮಾಡಿಸಲಾಗುವುದು’ ಎಂದರು.
ನಾರಾಯಣಪುರ ಅಣೆಕಟ್ಟೆ ನೀರಿನ ಸಾಮರ್ಥ್ಯ 492.252 ಮೀಟರ್ ಇದ್ದು ಈ ಪೈಕಿ 491.370ಮೀಟರ್ ಮಟ್ಟ ಕಾಯ್ದುಕೊಂಡು 20 ಕ್ರೆಸ್ಟ್ಗೇಟ್ ಮೂಲಕ 2,17ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಅಣೆಕಟ್ಟೆ ಒಳಹರಿವು ಆಧರಿಸಿ ಎರಡು ಗಂಟೆ ಗೊಮ್ಮೆ ನೀರು ಹರಿಸುವ ಪ್ರಮಾಣ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳಿವೆ’ ಎಂದು ಅಣೆಕಟ್ಟೆ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.