ADVERTISEMENT

ಮಾನ್ವಿ: ಕಲ್ಮಠದ ಅದ್ದೂರಿ ದಸರಾ ಮಹೋತ್ಸವ

ನಾಡದೇವಿ ಭುವನೇಶ್ವರಿಯ ರಜತ ಮೂರ್ತಿಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 10:59 IST
Last Updated 8 ಅಕ್ಟೋಬರ್ 2022, 10:59 IST
ಮಾನ್ವಿಯಲ್ಲಿ ಶುಕ್ರವಾರ ಕಲ್ಮಠದ 47ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು
ಮಾನ್ವಿಯಲ್ಲಿ ಶುಕ್ರವಾರ ಕಲ್ಮಠದ 47ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು   

ಮಾನ್ವಿ: ಪಟ್ಟಣದ ಮುಕ್ತಗುಚ್ಛ ಬೃಹನ್ಮಠದ ಕಲ್ಮಠದ 47ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ನಾಡದೇವಿ ಭುವನೇಶ್ವರಿಯ ರಜತ ಮೂರ್ತಿಯ ಮೆರವಣಿಗೆ, ಕುಂಭೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ಕಲ್ಮಠದಲ್ಲಿ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಾಡದೇವಿ ಭುವನೇಶ್ವರಿಯ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲ್ಮಠದವತಿಯಿಂದ ಭಾವೈಕ್ಯತೆಯ ದಸರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಗಿದೆ. ನಾಡದೇವಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ, ಈ ಬಾರಿಯ ದಸರಾ ನಾಡಿಗೆ ಸಮೃದ್ಧಿ ತರಲಿ’ ಎಂದು ಹಾರೈಸಿದರು.

ADVERTISEMENT

ಭುವನೇಶ್ವರಿ ದೇವಿಯ ರಜತ ಮೂರ್ತಿಯ ಮೆರವಣಿಗೆಗೆ ಸುಮಂಗಲೆಯರಿಂದ ಕುಂಭೋತ್ಸವ ನಡೆಯಿತು. ಬಿಚ್ಚಾಲಿ ಸಂಸ್ಥಾನದ ಅನೆಯ ಮೇಲೆ ಬಾಲದೇವಿಯರು ಕುಳಿತು ಗಮನ ಸೆಳೆದರು.

ಪಟ್ಟಣದ ಬಸ್ ನಿಲ್ದಾಣ, ಬಸವ ವೃತ್ತದ ಮಾರ್ಗವಾಗಿ ಪ್ರವಾಸಿ ಮಂದಿರದ ಹತ್ತಿರ ಇರುವ ತುಂಗಭದ್ರಾ ಕಾಲುವೆಯಲ್ಲಿ ಗಂಗೆ ಪೂಜೆ, ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ವಾದ್ಯ ಮೇಳಗಳು,ಕಲಾ ತಂಡಗಳು , ನಂದಿಕೋಲು ಕುಣಿತ ಹಾಗೂ ಒಡಪುಗಳನ್ನು ಹೇಳುತ್ತ ಕಲಾವಿದರು ಮೆರವಣಿಗೆಯಲ್ಲಿ ಗಮನ ಸೆಳೆದವು.

ಟ್ರ್ಯಾಕ್ಟರ್‌ಗಳಲ್ಲಿ ಸರ್ವಧರ್ಮ ಗುರುಗಳ ಭಾವಚಿತ್ರಗಳು, ವಿವಿಧ ಸ್ತಬ್ಧಚಿತ್ರಗಳು ಚಿತ್ರಗಳು ಹಾಗೂ ನವದುರ್ಗೆಯರ ವೇಷವನ್ನು ತೊಟ್ಟ ಬಾಲಕಿಯರು ಹಾಗೂ ವಿವಿಧ ಶರಣರ ವೇಷವನ್ನು ಧರಿಸಿದ್ದ ಬಾಲಕರು ವಿಶೇಷ ಆಕರ್ಷಣೆಯಾಗಿದ್ದರು.

ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ,ಹಚ್ಚೊಳ್ಳಿ ಮುತ್ತಿನಪೆಂಡೆ ಮಠದ ರುದ್ರಮುನೀಶ್ವರ ಸ್ವಾಮೀಜಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಜಿ.ಹಂಪಯ್ಯನಾಯಕ ಹಾಗೂ ಬಸನಗೌಡ ಬ್ಯಾಗವಾಟ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.