ರಾಯಚೂರು: ದೇಶದ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರೈತರು ಸಹಕರಿಸಿಬೇಕು. ವಾಡಿ–ಗದಗ ರೈಲ್ವೆ ಮಾರ್ಗ ನಿರ್ಮಾಣ ಮಾಡುವುದಕ್ಕೆ ರೈತರ ಜಮೀನು ಖರೀದಿಸಲು ಸರ್ಕಾರ ಮುಂದಾಗಿದ್ದು, ಪ್ರತಿ ಎಕರೆಗೆ ಕನಿಷ್ಠ ಬೆಲೆ ₹8 ರಿಂದ ₹10 ಲಕ್ಷದವರಿಗೆ ಖರೀದಿ ಮಾಡಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಾಡಿ - ಗದಗ ರೈಲ್ವೆ ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1,894ರ ಭೂ ಕಾಯ್ದೆ ಪ್ರಕಾರ ರೈತರು ಜಮೀನು ಮಾರಾಟ ಅಥವಾ ಕಳೆದುಕೊಂಡರೆ ಮತ್ತೆ ಮರಳಿ ಪಡೆಯುವ ಅವಕಾಶ ಇತ್ತು. ಆದರೆ 2013 ರಲ್ಲಿ ಹೊಸ ಕಾಯಿದೆ ಜಾರಿಗೆ ತರಲಾಗಿದೆ. ಇದರಲ್ಲಿ ರೈತರು ಮತ್ತು ಭೂ ಮಾಲೀಕರು ಜಮೀನು ಕಳೆದುಕೊಂಡರೆ ಅಥವಾ ಮಾರಾಟ ಮಾಡಿದ್ದಲ್ಲಿ ಮರಳಿ ಜಮೀನು ಹಿಂಪಡಿಯುವಂತಿಲ್ಲ. ಅದಕ್ಕಾಗಿ ರೈತರು ತಮ್ಮ ಜಮೀನನ್ನು ಸರ್ಕಾರದ ಕನಿಷ್ಠ ಬೆಲೆಗೆ ಮಾರಾಟ ಮಾಡಲು ಸಿದ್ಧರಾಗಿದ್ದರೆ ಮಾತ್ರ ಒಪ್ಪಿಕೊಳ್ಳಿ ಎಂದು ಹೇಳಿದರು.
ಉಪನೋಂದಣಿ ಇಲಾಖೆಯಲ್ಲಿ ಭೂ ಮಾಲೀಕರು ಮತ್ತು ರೈತರು ತಮ್ಮ ಜಮೀನುನನ್ನು ನೋಂದಣಿ ಮಾಡಿಕೊಳ್ಳಬೇಕು. ರೈಲ್ವೆ ನಿರ್ಮಾಣದಲ್ಲಿ ಯೋಜನಾ ಪರಿಶ್ರಮದಲ್ಲಿ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ಕೊಡುವ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಕೋವಿಡ್-19ರ ಮೂರನೇ ಅಲೆ ಆರಂಭದ ಭೀತಿಯಲ್ಲಿ ರೈತರು ಮತ್ತು ಕುಟುಂಬಸ್ಥರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ನೂತನ ಸರ್ಕಾರವು ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪಿಎಂ ಕಿಸಾನ್ ಯೋಜನೆಯಲ್ಲಿ ಎಲ್ಲಾ ರೈತರು ನೋಂದಣಿ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಜಮೀನು ಮಾರಾಟ ವಿಷಯಯದಲ್ಲಿ ರೈತರ ಕನಿಷ್ಠ ಬೆಲೆ ನಿಗದಿ ಕುರಿತು ಸರ್ಕಾರ ಗಮನಕ್ಕೆ ತರುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.
ಲಿಂಗಸುಗೂರು ತಾಲ್ಲೂಕಿನ ಹೊನ್ನಾಳಿ ಗ್ರಾಮದ ರೈತ ಅಂಬರೇಶ್ ಮಾತನಾಡಿ, ಪ್ರತಿ ಎಕರೆಗೆ ಕನಿಷ್ಠ ಬೆಲೆ ₹10 ರಿಂದ ₹15 ಲಕ್ಷ ಕೊಟ್ಟರೆ ಮಾತ್ರ ನಾವು ಜಮೀನು ಮಾರಾಟಕ್ಕೆ ಒಪ್ಪಿಗೆ ನೀಡಿತ್ತೇವೆ. ಇಲ್ಲವಾದಲ್ಲಿ ನಿರಾಕರಿಸುತ್ತೇವೆ. ಆದರೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಲೆಗೆ ಜಮೀನು ಮಾರಾಟ ಮಾಡಲು ಸಿದ್ಧರಿಲ್ಲ ಎಂದು ಹೇಳಿದರು.
ಜಿಲ್ಲಾ ನೋಂದಣಾಧಿಕಾರಿ ಸೈಯದ್ ಖಾದರ್ ಸಾಬ್, ಹಿರಿಯ ಉಪನೋಂದಣಾಧಿಕಾರಿ ಎಚ್. ಜೆ. ನಿವೇದಿತಾ, ಲಿಂಗಸುಗೂರು ಮತ್ತು ಕುಷ್ಟಗಿ ವಿಭಾಗದ ರೈಲ್ವೆ ಅಧಿಕಾರಿ ಷಣ್ಮುಖಪ್ಪ, ಲಿಂಗಸೂಗೂರು ತಹಶೀಲ್ದಾರ್ ಚಾಮರಾಜ್ ಪಾಟೀಲ, ಲಿಂಗಸೂಗೂರು ಕೃಷಿ ಇಲಾಖೆ ಉಪ ನಿರ್ದೇಶಕಿ ಎನ್. ಸರಸ್ವತಿ, ಮತ್ತು ಭೂ ಮಾಲೀಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.