ರಾಯಚೂರು: ಮಳೆಯಿಂದಾಗಿ ಹಾನಿಯಾದ ಬಡಾವಣೆಗಳಿಗೆ ಅಧಿಕಾರಿಗಳನ್ನು ನೇಮಿಸಿ ನಿರಾಶ್ರಿತರಿಗೆ ಆಹಾರ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮಳೆಯಿಂದ ಮನೆಗಳು ತೀವ್ರ ಹಾನಿಯಾದಲ್ಲಿ ಸಮುದಾಯ ಭವನಗಳಲ್ಲಿ ಆಶ್ರಯ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಶನಿವಾರ ತುರ್ತು ಸಭೆ ನಡೆಸಿದರು.
ಮಳೆಯಿಂದಾಗಿ ನಗರದ ಹಲವೆಡೆ ನೀರು ನುಗ್ಗಿ ಹಲವು ಅವಾಂತರ ಸೃಷ್ಟಿಯಾಗುತ್ತಿದ್ದು ಸಾರ್ವಜನಿಕರ ರಕ್ಷಣೆ ನೀಡಬೇಕು. ಅತಿಹೆಚ್ಚು ಮಳೆ ನೀರು ನುಗ್ಗಿ ಜಲಾವೃತ್ತಗೊಂಡ ಸಿಯತಲಾಬ್ ಬಡಾವಣೆಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸ್ಸಪ್ಪ ಮಕಾಲೆ ಅವರಿಗೆ ಸೂಚಿಸಿದರು.
ಅಲ್ಲದೇ ನೀರಭಾವಿ ಕುಂಟಾ, ಎಲ್.ಬಿಎಸ್ ನಗರ, ಜಲಾಲ್ ನಗರ, ಡ್ಯಾಡಿ ಕಾಲೋನಿ, ಆಶ್ರಯ ಕಾಲೋನಿ, ಜಹೀರಾಬಾದ್ ಸೇರಿದಂತೆ ಹಲವು ಪ್ರದೇಶಗಳಿಗೆ ಅಧಿಕಾರಿಗಳನ್ನು ನೇಮಿಸಿ ಮನೆಗಳಿಗೆ ನುಗ್ಗಿದ ನೀರು ಜೆಸಿಬಿ, ಮೊಟರ್ ಗಳಿಂದ ಖಾಲಿ ಮಾಡಿಸಬೇಕು. ನಿರಾಶ್ರತರಿಗೆ ಊಟದ ವ್ಯವಸ್ಥೆ ಮಾಡಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಸಮುದಾಯ ಭವನದಲ್ಲಿ ಟೆಂಟ್ ಹಾಕಿಸಿ ನೆರವು ನೀಡಬೇಕು.
ಸಹಾಯಕ ಆಯುಕ್ತರು ಉಸ್ತುವಾರಿ: ಪ್ರತಿವರ್ಷ ಹೆಚ್ಚು ಹಾನಿಯಾಗುವ ಪ್ರದೇಶಗಳನ್ನು ಗುರುತಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಬೃಹತ್ ಮಟ್ಟದ ಹಾನಿ ಸಂಭವಿಸಿದ್ದಲ್ಲಿ ಲೋಕೋಪಯೋಗಿ ಇಲಾಖೆ ಜೊತೆ ದುರಸ್ತಿ ಕಾರ್ಯ ಮಾಡಬೇಕು. ಇದಕ್ಕೆ ನಗರಸಭೆಯ ಸಾಮಾನ್ಯ ನಿಧಿ ಹಾಗೂ ಕಲಾನಿಧಿ ಅನುದಾನ ಬಳಸಿಕೊಂಡು ತುರ್ತು ಕಾರ್ಯಗಳನ್ನು ಕೈಗೊಳ್ಳಬೇಕು.
ಎಲ್ಲಾ ಬಡಾವಣೆಗಳ ಅಧಿಕಾರಿಗಳ ಕಾರ್ಯ ನೋಡಿಕೊಳ್ಳಲು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಒಟ್ಟಾರೆಯಾಗಿ ಮಳೆಯಿಂದ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ನೆರವು ನೀಡಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಸಹಾಯಕ ಆಯುಕ್ತ ಸಂತೋಶ ಕಾಮೆಗೌಡ, ನಗರಸಭೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.